ಡೈಲಿ ವಾರ್ತೆ:09 ಆಗಸ್ಟ್ 2023

ಬಾಡಿಗಾರ್ಡ್ ಚಿತ್ರದ ಹೆಸರಾಂತ ನಿರ್ದೇಶಕ ಸಿದ್ದಿಕಿ
ಹೃದಯಾಘಾತದಿಂದ ಮೃತ್ಯು!

ನಟ ವಿಜಯ ರಾಘವೇಂದ್ರ ಪತ್ನಿ, ನಿರ್ಮಾಪಕಿ ಸ್ಪಂದನಾ ಹೃದಯಾಘಾತದಿಂದ ನಿಧನ ಹೊಂದಿರುವ ಸುದ್ದಿ ಸ್ಯಾಂಡಲ್‌ವುಡ್ ಗೆ ಶಾಕ್ ನೀಡಿದೆ. ಈ ರೀತಿಯ ಹೃದಯಾಘಾತಗಳು ಯಾಕೆ ಆಗುತ್ತಿವೆ ಎನ್ನುವ ಚರ್ಚೆ ಕೂಡ ನಡೆದಿದೆ. ಈ ಮಧ್ಯೆ ಮಲಯಾಳಂ ಸಿನಿಮಾ ರಂಗದಲ್ಲೂ ಹೃದಯಾಘಾತದಿಂದ ಸಾವು ಸಂಭವಿಸಿದೆ.

ಮಲಯಾಳಂ ಸಿನಿಮಾ ರಂಗದ ಖ್ಯಾತ ನಿರ್ದೇಶಕ ಸಿದ್ದಿಕಿ ತೀವ್ರ ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನ ಹೊಂದಿದ್ದಾರೆ.

ಸೋಮವಾರ ಸಂಜೆ ವೇಳೆ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಕ್ಸ್ ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ಇಸಿಎಂಒ) ಬೆಂಬಲದಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. 24 ಗಂಟೆ ಅವರ ಆರೋಗ್ಯದ ಬಗ್ಗೆ ನಿಗಾ ಇರಿಸಲಾಗಿತ್ತು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಸಿದ್ದಿಕಿ ನಿಧನ ಹೊಂದಿದ್ದಾರೆ.

ಸಿದ್ದಿಕಿ ನ್ಯುಮೋನಿಯಾ ಮತ್ತು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ತೆಲುಗು, ಮಲಯಾಳಂ, ಹಿಂದಿ ಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಿದ್ದಿಕಿ, ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಚಿತ್ರಕ್ಕೂ ನಿರ್ದೇಶನ ಮಾಡಿದ್ದರು.

ಕಾಬುಲಿವಾಲಾ, ಗಾಡ್ ಫಾದರ್, ರಾಮ್‍ ಜಿ ರಾವ್ ಸ್ಪೀಕಿಂಗ್, ಫ್ರೆಂಡ್ಸ್, ಹಿಟ್ಲರ್ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸಿದ್ದಿಕಿ ಆಕ್ಷನ್ ಕಟ್ ಹೇಳಿದ್ದಾರೆ. ಸಿದ್ದಿಕಿ ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಪ್ರಾರ್ಥನೆ ಈಡೇರಲಿಲ್ಲ. ಅಗಲಿದೆ ನಿರ್ದೇಶಕನಿಗೆ ಅನೇಕರು ಕಂಬನಿ ಮಿಡಿದಿದ್ದಾರೆ.