ಡೈಲಿ ವಾರ್ತೆ: 18/09/2023

ಹೈದರಾಬಾದ್‍ನಲ್ಲಿ ಹಾಲಶ್ರೀ ಅಡಗಿರುವ ಶಂಕೆ: ಬಂಧನಕ್ಕೆ ತೆರಳಿದ ಸಿಸಿಬಿ ತಂಡ

ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚಿಸಿ ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರ ಗ್ಯಾಂಗ್‍ನ ತಲೆಮರೆಸಿಕೊಂಡಿರುವ ಆರೋಪಿ ಅಭಿನವ ಹಾಲಶ್ರೀ ಬಂಧನಕ್ಕೆ ಸಿಸಿಬಿ ತೀವ್ರ ಹುಡುಕಾಟ ಆರಂಭಿಸಿದೆ.

ಆರೋಪಿ ಹೈದರಾಬಾದ್‍ನಲ್ಲಿ ಅಡಗಿರುವ ಶಂಕೆ ಇದ್ದು ಬಂಧನಕ್ಕೆ ಸಿಸಿಬಿ (CCB) ಅಧಿಕಾರಿಗಳು ಅಲ್ಲಿಗೆ ತೆರಳಿದ್ದಾರೆ.

ತಲೆಮರೆಸಿಕೊಂಡಿರುವ ಹಾಲಶ್ರೀ ಪ್ರಕರಣದ ಮೂರನೇ ಆರೋಪಿ ಆಗಿದ್ದು, ಚೈತ್ರಾ ಬಂಧನದ ಬಳಿಕ ಯಾವುದೇ ಸುಳಿವಿಲ್ಲದಂತೆ ನಾಪತ್ತೆಯಾಗಿದ್ದರು. ಪ್ರಕರಣದಲ್ಲಿ ಸ್ವಾಮೀಜಿಯ ಕಾರು ಚಾಲಕ ನಿಂಗರಾಜ್‍ನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಹಾಲಶ್ರೀ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಆರೋಪಿ ಅಡಗಿರುವ ಸುಳಿವಿಗಾಗಿ ಚಾಲಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಇನ್ನೂ ಸ್ವಾಮೀಜಿ ಮೈಸೂರಿನಲ್ಲಿ ಕಾರು ಬಿಟ್ಟು ಬಳಿಕ ಅಲ್ಲಿಂದ ಪರಾರಿಯಾಗಿದ್ದರು. ಪೊಲೀಸರ ಕಣ್ಣು ತಪ್ಪಿಸಲು ಕಾರಿನ ನಂಬರ್ ಪ್ಲೇಟ್ ತೆಗೆದು ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ ಸ್ವಾಮೀಜಿಗಳ ಬಳಿ ನಾಲ್ಕು ಸಿಮ್‍ಗಳಿವೆ ಎನ್ನಲಾಗಿದೆ.
ಸ್ವಾಮೀಜಿ ಆಗಾಗ ಸ್ಥಳ ಬದಲಾಯಿಸುತ್ತಿದ್ದು ಬಂಧನಕ್ಕೆ ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.