ಡೈಲಿ ವಾರ್ತೆ: 20/09/2023

ಹುಣಸೂರು : ಬೈಕ್‌ಗಳು ಮುಖಾಮುಖಿ ಡಿಕ್ಕಿ – ಕಾಲೇಜು ವಿದ್ಯಾರ್ಥಿ ಮೃತ್ಯು

ಹುಣಸೂರು: ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿ ಪದವಿ ವಿದ್ಯಾರ್ಥಿಯೊರ್ವ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಿರೀಕ್ಯಾತನಹಳ್ಳಿ ಗ್ರಾಮದ ಮಹದೇವರ ಏಕೈಕ ಪುತ್ರ, ಹುಣಸೂರಿನ ಸಂತ ಜೋಸೆಫರ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ಹರ್ಷ (20) ಮೃತಪಟ್ಟ ದುರ್ದೈವಿ.

ಘಟನೆಯ ವಿವರ: ಸೋಮವಾರ ಗ್ರಾಮದಲ್ಲಿ ಗಣಪತಿ ಮೂರ್ತಿ ಪ್ರತಿಷ್ಟಾಪಿಸಿದ ನಂತರ ಡೇರಿಗೆ ಹಾಲು ಹಾಕಿ ಮನೆಗೆ ಬೈಕಿನಲ್ಲಿ ಮರಳುತ್ತಿದ್ದ ವೇಳೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಹುಣಸೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವ ಗ್ರಾಮದಲ್ಲಿ ಮಂಗಳವಾರ ಅಂತ್ಯ ಸಂಸ್ಕಾರ ನಡೆಯಿತು.

ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ: ಗ್ರಾಮಕ್ಕೆ ಶವ ಬರುತ್ತಿದಂತೆ ಪೋಷಕರು ಸಂಬಂಧಿಕರ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತು ಸ್ನೇಹಿತರ ಕಣ್ಣಲ್ಲಿ ಕಣ್ಣಾಲಿಗಳು ತುಂಬಿದ್ದವು. ಗ್ರಾಮದಲ್ಲಿ ಗಣಪತಿ ಹಬ್ಬದ ಬದಲಿಗೆ ಸೂತಕದಲ್ಲಿ ಮುಳುಗಿತ್ತು.