ಡೈಲಿ ವಾರ್ತೆ:24 ಸೆಪ್ಟೆಂಬರ್ 2023

ಶಿರಸಿ: ಜಾನುವಾರು ತುಂಬಿದ್ದ ವಾಹನ ಅಪಘಾತ – ಒಂದು ಹಸು ಸಾವು, ಇಬ್ಬರಿಗೆ ಗಾಯ!

ಶಿರಸಿ: ಜಾನುವಾರು ತುಂಬಿಕೊಂಡು ಬಂದ ವಾಹನ ತಾಲೂಕಿನ ಬುಗುಡಿಕೊಪ್ಪ ಬಳಿ ಸೇತುವೆಯ ರಕ್ಷಣಾ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಸೆ.24ರ ಭಾನುವಾರ‌ ನಡೆದಿದೆ.

ಚಾಲಕನ ನಿರ್ಲಕ್ಷ್ಯ‌ತನದಿಂದ ವಾಹನದಲ್ಲಿದ್ದ ಜಾನುವಾರಲ್ಲಿ ಒಂದು‌ ಮೃತಪಟ್ಟಿದೆ.
ಗಾಯಗೊಂಡವರು ಹಾನಗಲ್ ಮೂಲದವರು ಎನ್ನಲಾಗಿದ್ದು,‌ ಶಿರಸಿ ಅಗ್ನಿಶಾಮಕ ದಳ ಸಿಬಂದಿಗಳು ಬೆಳಗಿನ ಜಾವ‌ 45 ನಿಮಿಷಗಳ‌ ಕಾಲ ಕಾರ್ಯಾಚರಣೆ ಮಾಡಿ ಚಾಲಕ, ಸಹ ಪ್ರಯಾಣಿಕ ಹಾಗೂ ವಾಹನದಲ್ಲಿದ್ದ‌ ಜಾನುವಾರುಗಳನ್ನು ಹೊರ ತೆಗೆದರು.

ಒಂದೇ ವಾಹನದಲ್ಲಿ ಆರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವ ಬಗ್ಗೆ ಕೂಡ ಪೋಲಿಸರಿಂದ ತನಿಖೆ‌ ಆರಂಭವಾಗಿದೆ.‌