ಡೈಲಿ ವಾರ್ತೆ: 10/OCT/2023

ಟೊಮೆಟೋ ಕ್ರೇಟ್‌ಗಳ ನಡುವೆ ಜಾನುವಾರುಗಳನ್ನು ಬಚ್ಚಿಟ್ಟು ಅಕ್ರಮ ಸಾಗಾಟದ ವಾಹನ ಅಪಘಾತ – 1 ಹಸು ಸಾವು, 10 ಹಸುಗಳ ರಕ್ಷಣೆ

ಚಾಮರಾಜನಗರ: ಟೊಮೆಟೋ ಕ್ರೇಟ್‌ಗಳ ನಡುವೆ ಹಸುಗಳನ್ನು ಬಚ್ಚಿಟ್ಟು ಸಾಗಿಸುತ್ತಿದ್ದ ವಾಹನ ಅಪಘಾತವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಪುಣ್ಯದ ಹುಂಡಿ ಬಳಿ ನಡೆದಿದೆ.

ಗೂಡ್ಸ್ ವಾಹನದಲ್ಲಿ ಒಟ್ಟು 11 ಹಸುಗಳನ್ನು ಸಾಗಿಸಲಾಗುತ್ತಿದ್ದು, ಅದರಲ್ಲಿ 1 ಹಸು ಅಪಘಾತದಲ್ಲಿ ಸಾವನ್ನಪ್ಪಿದೆ. ಅವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಶಂಕೆ ಮೂಡಿದೆ. ಸದ್ಯ ಉಳಿದ 10 ಹಸುಗಳನ್ನು ರಕ್ಷಣೆ ಮಾಡಲಾಗಿದೆ.

ಇಂದು ಮುಂಜಾನೆ 5:30ರ ವೇಳೆಗೆ ಅಪಘಾತ ಸಂಭವಿಸಿದೆ. ಚಾಲಕ 11 ಹಸುಗಳನ್ನು ವಾಹನದಲ್ಲಿ ತುಂಬಿ, ಹಿಂಭಾಗದಲ್ಲಿ ಟೊಮೆಟೋ ಕ್ರೇಟ್‌ಗಳನ್ನು ಜೋಡಿಸಿದ್ದ. ವಾಹನದ ಹಿಂಭಾಗ ನೋಡಿದರೆ ಟೊಮೆಟೋ ಲೋಡ್‌ನಂತೆ ಕಾಣುವ ಹಾಗೆ ಬಿಂಬಿಸಿದ್ದಾನೆ.

ನಿದ್ದೆಯ ಮಂಪರಿನಲ್ಲಿ ಅತಿ ವೇಗವಾಗಿ ಬರುತ್ತಿದ್ದ ವಾಹನ ತಿರುವು ನೋಡದೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತವಾಗುತ್ತಿದ್ದಂತೆ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಘಟನೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.