ಡೈಲಿ ವಾರ್ತೆ: 10/OCT/2023

ಗಣೇಶ ಮೂರ್ತಿ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿದ್ದ ಯುವಕ
ಡಿಜೆ ಸದ್ದಿಗೆ ಬಲಿ.!

ಕೊಪ್ಪಳ: ಗಣೇಶ ವಿಸರ್ಜನೆ ವೇಳೆ ಡಿಜೆ ಸೌಂಡ್‍ಗೆ ಯುವಕ ಬಲಿಯಾದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಸುದೀಪ್ ಸಜ್ಜನ್ (30) ಮೃತ ಯುವಕ. ಈತನಿಗೆ ಡಿಜೆ ಸೌಂಡ್ ಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ 21 ದಿನದ ಗಣೇಶ ವಿಸರ್ಜನೆ ನಡೆದಿದೆ. ಗಂಗಾವತಿಯ ಪ್ರಶಾಂತ ನಗರದ ಯುವಕರಿಂದ ಡಿಜೆ ಮೆರವಣಿಗೆ ಆಯೋಜನೆ ಮಾಡಲಾಗಿತ್ತು ಅದಕ್ಕಾಗಿ ಹೆಚ್ಚಿನ ಸದ್ದಿಗಾಗಿ ಮಹಾರಾಷ್ಟ್ರ ಪುಣೆಯಿಂದ ಅಂಬಿಕಾ ಜಾಗರು ಡಿಜೆ ಸೌಂಡ್ ಸಿಸ್ಟಮ್ ರವರನ್ನು ಕರೆಸಲಾಗಿದೆ. ಅಂತೆಯೇ ಬೆಳ್ಳಂಬೆಳಗ್ಗೆ ಮೆರವಣಿಗೆ ಸಂದರ್ಭದಲ್ಲಿ ಡಿಜೆ ಸೌಂಡ್ ಹಾಕಿ ಡ್ಯಾನ್ಸ್ ಮಾಡಲಾಗುತ್ತಿತ್ತು.
ಮೆರವಣಿಗೆ ಸಾಗುತ್ತಿದ್ದ ವೇಳೆ ಸುದೀಪ್ ಡ್ಯಾನ್ಸ್ ಮಾಡುತ್ತಿದ್ದು, ಕೆಲ ಹೊತ್ತಿನ ಬಳಿಕ ಕುಸಿದು ಬಿದ್ದಿದ್ದಾನೆ. ಘಟನೆಯಿಂದ ಸ್ವಯಂ ಪ್ರೇರಿತವಾಗಿ ಯುವಕರು ಅರ್ಧಕ್ಕೆ ಡಿಜೆ ಬಂದ್ ಮಾಡಿದರು. ಯುವಕನ ಮೃತ ದೇಹ ಗಂಗಾವತಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಗಂಗಾವತಿ ನಗರ ಠಾಣೆ ಪೋಲಿಸರು ಡಿಜೆ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.