ಡೈಲಿ ವಾರ್ತೆ: 22/OCT/2023

ಪುರುಷರಿಗೂ ಪ್ರಯಾಣ ಉಚಿತ ಮಾಡಿ: ವಾಟಾಳ್ ಆಗ್ರಹ

ಬೆಂಗಳೂರು: ರಾಜ್ಯ ಸರ್ಕಾರ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮೀ ಯೋಜನೆ ನೀಡಿ, ಮನೆ ಯಜಮಾನರು ತಲೆ ತಗ್ಗಿಸುವಂತೆ ಮಾಡಿದೆ. ಈ ಮೂಲಕ ಮನೆಯ ಯಜಮಾನನಿಗೆ ಅವಮಾನ ಮಾಡುತ್ತಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಗ್ಯಾರಂಟಿಗಳು ಮಹಿಳೆಯರ ಕಡೆ ಮಾತ್ರ ಹೋಗಬಾರದು, ಪುರುಷರ ಕಡೆಗೂ ಅದು ಬರಬೇಕು. ಪುರುಷರಿಗೂ ಬಸ್ ಪ್ರಯಾಣ ಉಚಿತ ಮಾಡಿ. ಗೃಹಲಕ್ಷ್ಮೀ ಯೋಜನೆಯಂತೆ ಪುರುಷರಿಗೂ ಹಣ ನೀಡಬೇಕು. ಮಹಿಳೆಯರಿಗೆ ಈ ಯೋಜನೆಗಳನ್ನು ನೀಡಿರುವುದು ನನಗೆ ಖುಷಿ ಕೊಟ್ಟಿದೆ. ಹಾಗೆಯೇ ಇದನ್ನು ಪುರುಷರಿಗೂ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಮೈಸೂರಿನ ಸುಂದರವಾದ ದಸರಾ ಉತ್ಸವವನ್ನು ವಿನೂತನ ಚಳುವಳಿಗೆ ಉಪಯೋಗಿಸುತ್ತಿದ್ದೇವೆ. ದಸರಾಗೆ ಬೇರೆ ಬೇರೆ ರಾಜ್ಯಗಳಿಂದ ಸಾಕಷ್ಟು ಜನ ಬರುತ್ತಾರೆ. ಕರ್ನಾಟಕದ ಮೂಲೆ ಮೂಲೆಯಿಂದ ಮಹಿಳೆಯರು ಪುರುಷರು ಅಧಿಕವಾಗಿ ಬರುತ್ತಾರೆ. ಈ ಸಂದರ್ಭವನ್ನು ಬಳಸಿಕೊಂಡು ನಾನು ಸರ್ಕಾರದ ಮುಂದೆ ಈ ವಿಚಾರವನ್ನು ಇಡುತ್ತಿದ್ದೇನೆ ಎಂದಿದ್ದಾರೆ.
ಪ್ರತಿಭಟನೆಗೆ ನೇರವಾಗಿ ಅವರು ಬಿಎಂಟಿಸಿ (BMTC) ಬಸ್ ನಿಲ್ದಾಣದ ಒಳಗೆ ಕಾರಿನಲ್ಲಿ ಬಂದಿದ್ದಾರೆ. ಖಾಸಗಿ ವಾಹನಗಳಿಗೆ ಪ್ರವೇಶ ನಿಷೇಧವಿದ್ದರೂ ಲೆಕ್ಕಿಸದೇ ಒಳಗೆ ಬಂದು ಪ್ರತಿಭಟನೆ ನಡೆಸಿದ್ದಾರೆ.