ಡೈಲಿ ವಾರ್ತೆ: 22/OCT/2023

ಪರಶುರಾಮನ ಮೂರ್ತಿಯ ಕಂಚಿನ ಲೇಪನ ಹರಿದು ಮೂರ್ತಿಯ ಮೂಲ ಸ್ವರೂಪವನ್ನು ವಿರೂಪಗೊಳಿಸಿದ ಕಾಂಗ್ರೆಸ್: ಕಾರ್ಕಳ ನಗರ ಠಾಣೆಗೆ ಬಿಜೆಪಿ ದೂರು

ಉಡುಪಿ:ಕಾರ್ಕಳ ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿರುವ ಪರಶುರಾಮ ಥೀಂ ಪಾರ್ಕ್ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದೆ.
ರಿಯಾಲಿಟಿ ಚೆಕ್ ಮಾಡಲು ಹೊರಟ ಕಾಂಗ್ರೆಸ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೈಲೂರು ಉಮಿಕಲ್ ಕುಂಜ ಬೆಟ್ಟದ ಮೇಲೆ ನಿರ್ಮಾಣವಾಗಿದ್ದ ಪರಶುರಾಮನ ಪ್ರತಿಮೆ ಫೈಬರ್ ಎಂಬುದು ಕಾಂಗ್ರೆಸ್ ವಾದ.

ಕಳೆದ ಎರಡು ತಿಂಗಳಿನಿಂದ ಈ ವಿಚಾರ ಸಾಮಾಜಿಕ ಜಾಲತಾಣ ಮತ್ತು ಬಹಿರಂಗವಾಗಿ ಚರ್ಚೆಯನ್ನು ಹುಟ್ಟುಹಾಕಿದೆ. ಕಾರ್ಕಳ ಕಾಂಗ್ರೆಸ್ ಈ ಬಗ್ಗೆ ನಿರಂತರ ಪ್ರತಿಭಟನೆ ನಡೆಸುತ್ತಿದ್ದು, ಮೂರ್ತಿಯ ಸತ್ಯತೆಯ ಬಯಲಿಗೆ ಇಳಿದಿತ್ತು. ಈ ವಿಚಾರವಾಗಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಬಿಜೆಪಿ ಕಾರ್ಯಕರ್ತ ಸುನಿಲ್ ಎಂಬವರು ದೂರು ನೀಡಿದ್ದಾರೆ.

ಪರಶುರಾಮ ವಿಗ್ರಹದ ಮುಂದುವರಿದ ಕಾಮಗಾರಿಗಳು ನಡೆಯುತ್ತಿರುವ ಕಾರಣ ಮಾನ್ಯ ಜಿಲ್ಲಾಧಿಕಾರಿಯವರು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದಾರೆ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಗುಂಪುಗುಂಪಾಗಿ ಉಮಿಕಲ್ ಬೆಟ್ಟದ ಮೇಲೆ ಹೋಗಿದ್ದಾರೆ. ಸರ್ಕಾರಿ ಸೊತ್ತು ಆಗಿರುವ ಪರಶುರಾಮ ವಿಗ್ರಹಕ್ಕೆ ಹೊದಿಸಿದ ರಕ್ಷಣಾ ಕವಚವನ್ನು ಹರಿದು ಹಾಕಿ, ಕಂಚಿನ ಮೂರ್ತಿಯ ಮೇಲಿದ್ದ ಫಿನಿಷಿಂಗ್ ಲೇಪನವನ್ನು ಹರಿದಿದ್ದಾರೆ. ಮೂರ್ತಿಯ ಮೂಲ ಸ್ವರೂಪವನ್ನು ವಿರೂಪಗೊಳಿಸಿ ಹಾನಿ ಮಾಡಿ ಸರ್ಕಾರಕ್ಕೆ ನಷ್ಟವುಂಟುಮಾಡಿದ್ದಾರೆ. ಬಳಿಕ ಮೂರ್ತಿ ಫೈಬರ್ ಎಂಬಂತೆ ಸುಳ್ಳು ಸುದ್ದಿಯನ್ನು ಹಬ್ಬಿಸಿರುವುದಾಗಿ ಸುನೀಲ್ ದೂರಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.