ಡೈಲಿ ವಾರ್ತೆ: 22/OCT/2023

ಮಾಬುಕಳ:ಬೈಕ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ – ಸಾಪ್ಟ್ ವೇರ್ ಇಂಜಿನಿಯರ್ ಮೃತ್ಯು, ಇನ್ನೋರ್ವ ಗಂಭೀರ

ಕೋಟ: ಟ್ರಕ್ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಯುವಕ ಮೃತಪಟ್ಟ ಘಟನೆ ಭಾನುವಾರ ಸಂಜೆ ಮಾಬುಕಳದಲ್ಲಿ ಸಂಭವಿಸಿದೆ.

ಬೆಂಗಳೂರಿನ ಬಿ.ಟಿ.ಎಂ. ಲೇಔಟ್ ನಿವಾಸಿ ಪುನೀತ್ ( 27) ಮೃತ ಯುವಕ.

ಸಹಸವಾರ ಮಧು ಗಂಭೀರವಾಗಿ ಗಾಯಗೊಂಡಿದ್ದು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗೆಳೆಯರಾದ ಇವರಿಬ್ಬರು ದಸರಾ ರಜೆ ಪ್ರಯುಕ್ತ ಕರಾವಳಿ ಜಿಲ್ಲೆಗಳ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಹೊರಟಿದ್ದು, ಮಲ್ಪೆಗೆ ಭೇಟಿ ನೀಡಿ ಅಲ್ಲಿಂದ ಮುರ್ಡೇಶ್ವರಕ್ಕೆ ತೆರಳುವ ಸಂದರ್ಭದಲ್ಲಿ ಮಾಬುಕಳ ಸಮೀಪ ಕುಂದಾಪುರ ಕಡೆಗೆ ಸಂಚರಿಸುತ್ತಿದ್ದ ಗುಜುರಾತ್ ಮೂಲದ ಟ್ರಕ್ ಢಿಕ್ಕಿಯಾಗಿದ್ದು ಅಪಘಾತದ ತೀವ್ರತೆಗೆ ಇಬ್ಬರು ಗಂಭೀರ ಗಾಯಗೊಂಡಿದ್ದರು. ತತ್‍ಕ್ಷಣ ಅವರನ್ನು ಸಾಸ್ತಾನ ಟೋಲ್ ನ ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಪುನೀತ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಕೋಟ ಠಾಣಾಧಿಕಾರಿ ಶಂಭುಲಿಂಗಯ್ಯ ಹಾಗೂ ಸಿಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.