ಡೈಲಿ ವಾರ್ತೆ: 31/OCT/2023

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‍ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು – ಡ್ರೈವರ್, ಕಂಡಕ್ಟರ್ ಸೇರಿ 46 ಪ್ರಯಾಣಿಕರು ಪಾರು!

ಬೀದರ್: ಮರಾಠಾ ಮೀಸಲಾತಿಗಾಗಿ ಮಹಾರಾಷ್ಟ್ರದಲ್ಲಿ ಹೋರಾಟ ತೀವ್ರಗೊಂಡಿದೆ. ಕೆಎಸ್‍ಆರ್ ಟಿಸಿ ಬಸ್‍ಗೆ ಬೆಂಕಿಹಚ್ಚಿ ಮರಾಠಾ ಪುಂಡರು ಪುಂಡಾಟ ಮೆರೆದಿದ್ದಾರೆ.

ಮಹಾರಾಷ್ಟ್ರದ ಉಮ್ಮರ್ಗಾದ ತುರುರಿ ಬಳಿ ಬಸ್ ಹೊತ್ತಿ ಉರಿದಿದೆ. ಇದಕ್ಕೂ ಮುನ್ನ ಬಸ್‍ನ ಗ್ಲಾಸ್ ಹಾಗೂ ಕಿಟಕಿಗಳ ಗಾಜು ಪುಡಿಪುಡಿ ಮಾಡಿದ್ದಾರೆ. ಘಟನೆಯಲ್ಲಿ ಡ್ರೈವರ್, ಕಂಡಕ್ಟರ್ ಸೇರಿ ಬಸ್‍ನಲ್ಲಿದ್ದ 46 ಮಂದಿ ಪ್ರಯಾಣಿಕರು ಬಚಾವ್ ಆಗಿದ್ದಾರೆ.

ಈ ಬಸ್ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಡಿಪೋಗೆ ಸೇರಿದ್ದಾಗಿದೆ. ಭಾಲ್ಕಿಯಿಂದ ಪುಣೆಗೆ ಹೊರಟಿತ್ತು. ಈ ವೇಳೆ ಕಿಡಿಗೇಡಿಗಳು ದುಷ್ಕೃತ್ಯ ಮೆರೆದಿದ್ದಾರೆ. ಇದು ಕನ್ನಡ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಮುಂಜಾಗ್ರತಾ ಕ್ರಮವಾಗಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮವು ಮಹಾರಾಷ್ಟ್ರಕ್ಕೆ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಿಂದ ಹೊರಡುವ ಬಸ್ ಸಂಚಾರಗಳೆಲ್ಲವನ್ನು ಬಂದ್ ಮಾಡಲಾಗಿದೆ. ಅಲ್ಲದೇ ಈಗಾಗಲೇ ಮಹಾರಾಷ್ಟ್ರ ವ್ಯಾಪ್ತಿಯೊಳಗಿರುವ ಬಸ್‍ಗಳು ಸಮೀಪದ ಡಿಪೋ ಇಲ್ಲವೇ ಪೊಲೀಸ್ ಠಾಣೆಯೊಳಗೆ ನಿಲ್ಲಿಸಲು ಕೆಕೆಆರ್ ಟಿಸಿ ಎಂಡಿ ರಾಚಪ್ಪ ಅವರು ತಮ್ಮ ನಿಗಮದ ಬಸ್ ಚಾಲಕ, ನಿರ್ವಾಹಕರಿಗೆ ಸೂಚನೆ ನೀಡಿದ್ದಾರೆ.