ಡೈಲಿ ವಾರ್ತೆ: 12/NOV/2023

ಹೊಲಕ್ಕೆ ಹೋಗಿದ್ದ ವೃದ್ದೆಯ ಕೊಲೆ; ಆರೋಪಿ ಬಂಧನ, ಹತ್ಯೆಗೆ ಕಾರಣವೇನು ಗೊತ್ತಾ?

ಬೆಂಗಳೂರು ಗ್ರಾಮಾಂತರ: ರಾಗಿ ಹೊಲಕ್ಕೆ ಹೋಗಿದ್ದ ವೃದ್ದೆಯ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವೃದ್ದೆ ಚೌಡಮ್ಮ(75) ಎಂದು ತಿಳಿದು ಬಂದಿದೆ. ವೃದ್ದೆಯನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ ಗ್ರಾಮದ ಪ್ರಭಾಕರ್ ( 45 ) ಎಂಬಾತನನ್ನು ಇದೀಗ ಬಂಧಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಅಜ್ಜಿ ಹಾಗೂ ಪ್ರಭಾಕರ್ ಕುಟುಂಬಸ್ಥರ ನಡುವೆ ಕಲಹ ನಡೆಯುತ್ತಿದ್ದು, ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ.

ಘಟನೆ ವಿವರ:
ಇನ್ನು ಚೌಡಮ್ಮ ಅವರು ನಿನ್ನೆ ಸಹ ಹೊಲದಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ಜಗಳವಾಡಿದ್ದರಂತೆ. ಹೌದು ರಾಗಿ ಹೊಲಕ್ಕೆ ದನ-ಕರುಗಳನ್ನು ಬಿಟ್ಟು ಬೆಳೆ ಹಾಳು ಮಾಡುತ್ತಾರೆ ಎಂದು ಕಾವಲಿಗೆ ಹೋಗಿದ್ದ ವೇಳೆ ಮೃತ ವೃದ್ದೆ ಹಾಗೂ ಆರೋಪಿ ನಡುವೆ ಜಗಳವಾಗಿದೆ. ಈ ವಿಷಯವನ್ನು ಮನೆಯವರಿಗೆ ಹೇಳುತ್ತಾಳೆ ಎಂಬ ಭಯದಿಂದ ಹಿಂಬದಿಯಿಂದ ಬಂದು ತಲೆಗೆ ಹೊಡೆದು, ಸೀರೆಯಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ. ಸಂಜೆ ವೃದ್ದೆ ಮನೆಗೆ ಬಾರದಿದ್ದನ್ನ ಕಂಡು ಪರಿಶೀಲನೆಗೆ ಹೋದ ಚೌಡಮ್ಮ ಅವರು ಶವವಾಗಿ ಪತ್ತೆಯಾಗಿದೆ. ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.