

ಡೈಲಿ ವಾರ್ತೆ: 27/DEC/2023


ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಂಟ್ವಾಳ ಹಾಗೂ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲು
ಬಂಟ್ವಾಳ : ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಭಾಷಣ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಂಟ್ವಾಳ ನಗರ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ವುಮೆನ್ಸ್ ಇಂಡಿಯಾ ಮೂಮೆಂಟ್ಸ್ ನಿಂದು ಪ್ರತ್ಯೇಕ ದೂರು ನೀಡಿದ್ದಾರೆ.
ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಂ ಮಹಿಳೆಯರನ್ನು ಅತ್ಯಂತ ಕೀಳಾಗಿ ಅವಮಾನಿಸಿ, ವಿಚ್ಛೇದಿತ ಮಹಿಳೆಯರಿಗೆ ಕಳಂಕ ಹಚ್ಚುವ ಹಾಗೂ ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ಕುಂದುಂಟು ಮಾಡುವ ಭಾಷಣವನ್ನು ಪ್ರಭಾಕರ ಭಟ್ ಮಾಡಿದ್ದಾರೆ. ಮುಸ್ಲಿಂ ಮಹಿಳೆಯರ ಲೈಂಗಿಕ ಜೀವನವನ್ನು ಕೀಳಾಗಿ ಬಿಂಬಿಸಿದ ಅವರು ಮುಸ್ಲಿಂ ಮಹಿಳೆಯರ ಹಕ್ಕುಗಳಿಗೆ ಚ್ಯುತಿ ತರುವಂತಹ ಮಾತುಗಳನ್ನು ಆಡಿದ್ದಾರೆ ಹಾಗಾಗಿ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ವುಮೆನ್ಸ್ ಇಂಡಿಯಾ ಮೂಮೆಂಟ್ಸ್ ನ ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿ ಶಮೀಮ ದೂರು ನೀಡಿದ್ದು ಈ ಸಂದರ್ಭ ಮೂಮೆಂಟ್ಸ್ ನ ಜಿಲ್ಲಾಧ್ಯಕ್ಷೆ ನೌರಿನ್ ಆಲಂಪಾಡಿ, ಉಪಾಧ್ಯಕ್ಷೆ ಝಹನಾ ಬಂಟ್ವಾಳ ಉಪಸ್ಥಿತರಿದ್ದರು.