ಡೈಲಿ ವಾರ್ತೆ: 01/Feb/2024

ಬಿಗ್ ಬಾಸ್’ನಿಂದಾಗಿ ನಾಪತ್ತೆಯಾಗಿದ್ದ ವ್ಯಕ್ತಿ ತೃತೀಯ ಲಿಂಗಿಯಾಗಿ ಪತ್ತೆ

ಬಿಗ್ ಬಾಸ್ ನಿಂದ ಏನೆಲ್ಲ ಆಗಬಹುದು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಈಗಾಗಲೇ ಇವೆ. ಇದೀಗ ಅಚ್ಚರಿ ಪಡುವಂಥ ಸಂಗತಿಯೊಂದು ಕನ್ನಡ ಬಿಗ್ ಬಾಸ್ ನಿಂದಾಗಿ ನಡೆದಿದೆ. ಹಲವರು ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಬಿಗ್ ಬಾಸ್ ನಿಂದಾಗಿ ತೃತೀಯ ಲಿಂಗಿಯಾಗಿ ಪತ್ತೆಯಾಗಿದ್ದಾರೆ. ನಿಜಕ್ಕೂ ಇದು ರೋಚಕ ಘಟನೆಯೇ ಸರಿ.

ರಾಮನಗರ ಮೂಲದ ವ್ಯಕ್ತಿ ಲಕ್ಷ್ಮಣ್ ರಾವ್ ಕಳೆದ ಏಳು ವರ್ಷಗಳ ಹಿಂದೆ ಸಾಲ ಮಾಡಿದ್ದರು. ಸಾಲವನ್ನು ತೀರಿಸಲಾಗದೇ ಊರು ಬಿಟ್ಟು ಹೋಗಿದ್ದರು. ಇಬ್ಬರು ಮಕ್ಕಳು ಮತ್ತು ಪತ್ನಿ ಕಂಗಾಲಾಗಿದ್ದರು. ಲಕ್ಷ್ಮಣ್ ರಾವ್ ನಾಪತ್ತೆ ಕುರಿತಂತೆ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪತ್ತೆಯಾಗಿ ಪೋಲಿಸರು ಸಾಕಷ್ಟು ಪ್ರಯತ್ನ ಕೂಡ ಪಟ್ಟಿದ್ದರು.

ಈ ಲಕ್ಷ್ಮಣ್ ರಾವ್ ಸಿಕ್ಕಿದ್ದೇ ಒಂದು ರೋಚಕ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ತೃತೀಯ ಲಿಂಗಿ ನೀತು ಎಂಟ್ರಿ ಕೊಟ್ಟಾಗ ಅವರನ್ನು ಸ್ವಾಗತಿಸಲು ಲಕ್ಷ್ಮಣ್ ರಾವ್ ಕೂಡ ಹೋಗಿದ್ದರು. ಸನ್ಮಾನ ಮಾಡುವ ವೇಳೆ ರೀಲ್ಸ್ ಮಾಡಲಾಗಿತ್ತು. ಅದು ವೈರಲ್ ಕೂಡ ವಾಗಿತ್ತು. ರೀಲ್ಸ್ ನಲ್ಲಿ ತೃತೀಯ ಲಿಂಗಿಯಾಗಿದ್ದ ಲಕ್ಷ್ಮಣ್ ರಾವ್, ಅವರನ್ನು ಪೊಲೀಸರು ಪತ್ತೆ ಹಚ್ಚಿದ್ದರು.

ರೀಲ್ಸ್ ನೋಡುವ ವೇಳೆ ಅನುಮಾನಗೊಂಡ ಪೋಲಿಸರು ಕುಟುಂಬಸ್ಥರಿಗೆ ಮಾಹಿತಿ ನೀಡಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಲಕ್ಷ್ಮಣ್ ರಾವ್ ಎಂಬುದು ಕನ್ಪರ್ಮ್ ಆಗಿದೆ. ನನಗೆ ಹೆಂಡತಿ, ಮಕ್ಕಳು ಬೇಡ ನಾನು ತೃತೀಯ ಲಿಂಗಿಗಳ ಜೊತೆ ಇರ್ತಿನಿ ಅಂತಾ ಕುಟುಂಬವನ್ನು ಬಿಟ್ಟು ಮತ್ತೆ ವಾಪಸ್ ಹೋಗಿದ್ದಾರೆ ಲಕ್ಷ್ಮಣ್ ರಾವ್. ಮುಚ್ಚಳಿಕೆ ಬರೆಸಿಕೊಂಡು ನಾಪತ್ತೆ ಕೇಸ್ ಕ್ಲೋಸ್ ಮಾಡಿದ್ದಾರೆ ಪೋಲಿಸರು.