ಡೈಲಿ ವಾರ್ತೆ: 11/Mar/2024

ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯ ದರೋಡೆ ಪ್ರಕರಣ: ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು

ವಿಟ್ಲ: ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯ ಕಿಟಕಿ ಮೂಲಕ ಒಳ ನುಸುಳಿ ಕೋಟ್ಯಾಂತರ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ ನಾಲ್ಕು ಮಂದಿ ಆರೋಪಿಗಳ ಪೈಕಿ ಮೂವರನ್ನು ಸೋಮವಾರ ಸ್ಥಳ ಮಹಜರಿಗೆ ಅಡ್ಯನಡ್ಕ ಪೊಲೀಸರು ಕರೆದುಕೊಂಡು ಬಂದು, ಬಂಧಿಸಿದ್ದಾರೆ.

ಕಾಸರಗೋಡು ಮೂಲದ ಇಬ್ರಾಹಿಂ ಕಲಂದರ್ (41), ಮಹಮ್ಮದ್ ರಫೀಕ್ ಯಾನೆ ಗೂಡಿನ ಬಳಿ ರಫೀಕ್ ( 35 ), ಬಾಯಾರು ಗ್ರಾಮದ ದಯಾನಂದ ಎಸ್ (37) ಕಳ್ಳತನದ ಪ್ರಮುಖ ಆರೋಪಿಗಳು ಎನ್ನಲಾಗಿದೆ. ಫೆ.28 ರಂದು ಈ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಾ.10 ರಂದು ಬಂಧನವನ್ನು ಅಧಿಕೃತಗೊಳಿಸಿದ್ದಾರೆ.
ಬ್ರಿಜಾ ಕಾರಿನ ಮೂಲಕ ಆಗಮಿಸಿದ ಕಳ್ಳರು ಬ್ಯಾಂಕ್ ಕಿಟಕಿಯ ಸರಳು ತುಂಡರಿಸಿ, ಸೇಫ್ ಲಾಕರ್ ನ್ನು ಗ್ಯಾಸ್ ಕಟ್ಟರ್ ಮೂಲಕ ಕೊರೆದು ಲಾಕರ್ ನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ದೋಚಿದ್ದರು. ಆ ಬಳಿಕ ಕದ್ದ ಮಾಲನ್ನು ನಾಲ್ಕು ಪಾಲು ಮಾಡಿಕೊಂಡ ಕಳ್ಳರು ಒಂದು ಪಾಲನ್ನು ಬಾಯಾರಿನ ಪೊಸಡಿ ಗುಂಪೆ ಗುಡ್ಡದ ತಪ್ಪಲಿನ ಸಜಂಕಿಲ ಸಮೀಪ ನಿರ್ಜನ ಪ್ರದೇಶದಲ್ಲಿರುವ ಆಟದ ಮೈದಾನವೊಂದರಲ್ಲಿ ಇದನ್ನು ಅಡಗಿಸಿಟ್ಟಿರುವ ವಿಚಾರವನ್ನು ವಿಚಾರಣೆ ವೇಳೆ ಬಹಿರಂಗ ಪಡಿಸಿದ್ದರು.
ಕೆಲವು ವರ್ಷಗಳಿಂದ ವೆಲ್ಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಸೇಫ್ ಲಾಕರ್ ತುಂಡರಿಸಲು ಸಹಕರಿಸಿದ್ದಾನೆ. ಇನ್ನಿಬ್ಬರು ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.