ಡೈಲಿ ವಾರ್ತೆ: 22/Mar/2024

ಅಕ್ರಮ ಗ್ಯಾಸ್ ಅಡ್ಡೆಗೆ ದಾಳಿ: ಆಹಾರ ನಿರೀಕ್ಷಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ವಿಜಯಪುರ: ಅಕ್ರಮವಾಗಿ ಆಟೋಗಳಿಗೆ ಎಲ್.ಪಿ.ಜಿ. ಗ್ಯಾಸ್ ತುಂಬಿಸುವುದನ್ನು ತಡೆಯಲು ದಾಳಿ ನಡೆಸಿದ್ದ ಆಹಾರ ನಿರೀಕ್ಷಕನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

ಹಲ್ಲೆಗೊಳಗಾದ ಆಹಾರ ನಿರೀಕ್ಷಕ ನಯೀಮ್ ಅತ್ತಾರ ದುಷ್ಕರ್ಮಿಗಳ ದಾಳಿಯಲ್ಲಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯಪುರ ನಗರದ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿ ಅಕ್ರಮವಾಗಿ ಆಟೋಗಳಿಗೆ ಎಲ್.ಪಿ.ಜಿ. ಗ್ಯಾಸ್ ತುಂಬುಸುವಾಗ ಖಚಿತ ಮಾಹಿತಿ ಮೇರೆಗೆ ನಯೀಮ್ ದಾಳಿ ನಡೆಸಿದ್ದರು.
ಆರೋಪಿ ಶಬ್ಬೀರ್ ಜಮಖಂಡಿ ನಡೆಸುತ್ತಿದ್ದ ಅಕ್ರಮ ಗ್ಯಾಸ್ ತುಂಬಿಸುವ ಅಡ್ಡೆಯಲ್ಲಿ ಸಿಲಿಂಡರ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.
ಇದರಿಂದಾಗಿ ಕುಪಿತಗೊಂಡಿದ್ದ ಶಬ್ಬೀರ ಜಮಖಂಡಿ ತನ್ನ ಸ್ನೇಹಿತರಾದ ಸೋನು ನದಾಫ್ ಹಾಗೂ ಇತರರೊಂದಿಗೆ ರಹೀಂ‌ ನಗರದಲ್ಲಿರುವ ಆಹಾರ ಇಲಾಖೆ ನಿರೀಕ್ಷಕ ನಯೀಮ್ ಮನೆಗೆ ತೆರಳಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ನಯೀಮ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ವಿರುದ್ಧ ನಯೀಮ್ ಗಾಂಧಿಚೌಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.