ಡೈಲಿ ವಾರ್ತೆ: 22/Mar/2024

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾರ್ಚ್ 28 ರವರೆಗೆ ಇಡಿ ಕಸ್ಟಡಿಗೆ.!

ದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು 7 ದಿನಗಳ ಕಾಲ ಅಂದರೆ ಮಾರ್ಚ್ 28ರವರೆಗೆ ಇಡಿ ವಶದಲ್ಲಿರಿಸಲು ದೆಹಲಿ ರೋಸ್ ಅವೆನ್ಯೂ ನ್ಯಾಯಾಲಯ ಆದೇಶ ನೀಡಿದೆ.

ದೆಹಲಿ ಸಿಎಂ ಅವರನ್ನು 10 ದಿನಗಳ ಕಸ್ಟಡಿಗೆ ನೀಡುವಂತೆ ಜಾರಿ ನಿರ್ದೇಶನಾಲಯ (ED) ಕೋರಿತ್ತು. ಅರವಿಂದ್ ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ 9 ಸಮನ್ಸ್‌ಗಳನ್ನು ಉಲ್ಲಂಘಿಸಿದ್ದಾರೆ ಎಂದು ಇಡಿ ಹೇಳಿದ್ದು ಅವರ ಹೇಳಿಕೆಯನ್ನು ದಾಖಲಿಸಿದಾಗ ಅವರು ಸತ್ಯವನ್ನು ಬಹಿರಂಗಪಡಿಸಲಿಲ್ಲ ಅಥವಾ ಸರಿಯಾದ ಸಂಗತಿಗಳನ್ನು ನೀಡಲಿಲ್ಲ ಎಂದಿದೆ.

2022 ರಲ್ಲಿ ಎಎಪಿಯ ಗೋವಾ ಚುನಾವಣಾ ಪ್ರಚಾರದಲ್ಲಿ ಉತ್ಪತ್ತಿಯಾದ ಅಪರಾಧದ ಆದಾಯದ ಬಳಕೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಇಡಿ ನ್ಯಾಯಾಲಯಕ್ಕೆ ಹೇಳಿದೆ. ಕೆಲವು ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲು ಮದ್ಯ ನೀತಿ ರೂಪಿಸುವ ಸಂಚಿನಲ್ಲಿ ಸಿಎಂ ಕೇಜ್ರಿವಾಲ್ ಭಾಗಿಯಾಗಿದ್ದಾರೆ, ಕಿಕ್‌ಬ್ಯಾಕ್‌ಗೆ ಒತ್ತಾಯಿಸುತ್ತಿದ್ದಾರೆ ಎಂದು ಇಡಿ ಕೋರ್ಟ್ ನಲ್ಲಿ ಹೇಳಿದೆ.

ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಕರಾಳ ದಿನ:

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 28 ರವರೆಗೆ ಇಡಿ ಕಸ್ಟಡಿಗೆ ಕೋರ್ಟ್ ಆದೇಶಿಸಿದ್ದು ಈ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ನಾಯಕಿ ಮತ್ತು ದೆಹಲಿ ಸಚಿವ ಅತಿಶಿ, “ಬಿಜೆಪಿ ಇಡಿ ಮರೆಯಲ್ಲಿ ನಿಂತು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದೆ.. ಇಡಿ ಬಿಜೆಪಿಯ ಭಾಗವೇ ಎಂದು ಪಕ್ಷವು ಪತ್ರಿಕಾ ಪ್ರಕಟಣೆಯನ್ನು ನೀಡುತ್ತಿದೆ. ಇಲ್ಲಿಯವರೆಗೆ, ಎಎಪಿ ನಾಯಕರ ವಿರುದ್ಧ ಇಡಿಯಿಂದ ಯಾವುದೇ ಅಪರಾಧದ ಆದಾಯ ಕಂಡುಬಂದಿಲ್ಲ. ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಕರಾಳ ದಿನ. ಇಂದು ನಡೆದಿರುವ ಪ್ರಜಾಪ್ರಭುತ್ವದ ಕೊಲೆಯನ್ನು ದೇಶದ ಜನತೆ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ

ಬಿಜೆಪಿ ವಿರುದ್ಧ ನಾಲ್ಕು ದಿನಗಳ ಪ್ರತಿಭಟನೆ ಎಎಪಿ ಘೋಷಣೆ:
ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನದ ವಿರುದ್ಧ ಆಪ್ ಇಂಡಿಯಾ ಬ್ಲಾಕ್ ನಾಯಕರೊಂದಿಗೆ ಪಕ್ಷದ ಕಾರ್ಯಕರ್ತರು ನಾಳೆ ಬೆಳಗ್ಗೆ 10 ಗಂಟೆಗೆ ದೆಹಲಿಯ ಶಹೀದಿ ಪಾರ್ಕ್‌ನಲ್ಲಿ ಐಟಿಒದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ದೆಹಲಿ ಸಚಿವ ಮತ್ತು ಹಿರಿಯ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಗೋಪಾಲ್ ರಾಯ್ ಹೇಳಿದ್ದಾರೆ. ನಾಳೆ, ಭಗತ್ ಸಿಂಗ್, ರಾಜಗುರು ಅವರ ಶಹೀದಿ ದಿವಸ್. ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಈ ದಿನವನ್ನು ಗುರುತಿಸಿ, ಮಾರ್ಚ್ 23 ರಂದು, ನಾವು ಶಹೀದಿ ಪಾರ್ಕ್, ಐಟಿಒ ಹೊರಗೆ ಪ್ರತಿಭಟನೆ ನಡೆಸುತ್ತೇವೆ ಎಂದು ರಾಯ್ ಹೇಳಿದರು. ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಭಾಗವಹಿಸಲಿದ್ದಾರೆ.

ಮಾರ್ಚ್ 24 ರಂದು ನಗರದಾದ್ಯಂತ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ದಹಿಸಲಾಗುವುದು ಎಂದು ರಾಯ್ ಹೇಳಿದರು. ಮಾರ್ಚ್ 25 ರಂದು ಪಕ್ಷದ ಮುಖಂಡರು ಹೋಳಿ ಆಚರಿಸುವುದಿಲ್ಲ. ಮನೆ ಮನೆಗೆ ತೆರಳಿ ಬಿಜೆಪಿ ಕಾರ್ಯಚಟುವಟಿಕೆಗಳ ಬಗ್ಗೆ ಜನರಿಗೆ ತಿಳಿಸಲಿದ್ದಾರೆ. ಮರುದಿನ (ಮಾರ್ಚ್ 26) ‘ಪ್ರಧಾನಿ ಮನೆ’ ಎದುರು ಪ್ರತಿಭಟನೆ ನಡೆಸಲಾಗುವುದು. ಅಖಿಲ ಭಾರತ ಮಟ್ಟದಲ್ಲಿ ‘ಮೆಗಾ ಪ್ರತಿಭಟನೆ’ನಡೆಯಲಿದೆ ಎಂದು ರಾಯ್ ಹೇಳಿದ್ದಾರೆ.