ಡೈಲಿ ವಾರ್ತೆ: 26/Mar/2024

ಮನೆ ಕಟ್ಟಲು ಹಣಕ್ಕಾಗಿ ಬಾಲಕನ ಅಪಹರಿಸಿ ಕೊಲೆ – ಆರೋಪಿ ಮೌಲ್ವಿ ಸೆರೆ!

ಥಾಣೆ: ಹೊಸ ಮನೆ ಕಟ್ಟಿಸಲು 23 ಲಕ್ಷ ಸಂಗ್ರಹಿಸಲು ಸಲ್ಮಾನ್ ಮೌಲ್ವಿ ಎಂಬಾತ 9 ವರ್ಷದ ಬಾಲಕನೊಬ್ಬನನ್ನು ಅಪಹರಿಸಿ ಕೊಂದ ಹೇಯ ಕೃತ್ಯ
ಮಹಾರಾಷ್ಟ್ರದ ಥಾಣೆಯಲ್ಲಿ ಘಟನೆ ನಡೆದಿದೆ.

ಮಸೀದಿಯಲ್ಲಿ ಸಂಜೆ ಪ್ರಾರ್ಥನೆ ಮುಗಿಸಿ ಕಟ್ಟಡದಿಂದ ಹೊರಬರುತ್ತಿದ್ದಾಗ ಅಪಹರಿಸಿ ಗೋಣಿ ಚೀಲದಲ್ಲಿ ತುಂಬಿಸಿ ಕೊಂದು ಹಾಕಿದ್ದ. ಕೊಲೆಯಾದ ಬಾಲಕನನ್ನು ಇಬಾದ್ ಎಂದು ಹೇಳಲಾಗಿದೆ.

ಥಾಣೆಯ ಬದ್ಲಾಪುರದ ಗೋರೆಗಾಂವ್ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದ ಘಟನೆಗಳ ಆಘಾತಕಾರಿ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಪ್ರಮುಖ ಆರೋಪಿ ಸಲ್ಮಾನ್ ಮೌಲ್ವಿ ಹೊಸ ಮನೆ ನಿರ್ಮಿಸಲು ಹಣ ಸಂಗ್ರಹಿಸುತ್ತಿದ್ದ. ಈ ವೇಳೆ ಪಕ್ಕದ ಬಾಲಕನನ್ನು ಅಪಹರಿಸಿ ಆತನ ಕುಟುಂಬ ಸದಸ್ಯರಿಗೆ ದುಡ್ಡು ಕೇಳುವ ಯೋಜನೆ ಹಾಕಿದ್ದ. ಸಂಜೆಯ ಪ್ರಾರ್ಥನೆಯ ನಂತರ ಇಬಾದ್ ಮನೆಗೆ ಮರಳಿರಲಿಲ್ಲ. ಬಾಲಕನ ಕುಟುಂಬವು ತೀವ್ರ ಹುಡುಕಾಟ ನಡೆಸಿತ್ತು. ಇಬಾದ್ ನ ತಂದೆ ಮುದಾಸಿರ್ ಗೆ ಕರೆ ಮಾಡಿದಾಗ ದುಡ್ಡು ಕೇಳಿದ್ದ. ಅದಕ್ಕವರು ಕೊಡಲು ಒಪ್ಪಿರಲಿಲ್ಲ. ಬಳಿಕ ಸಲ್ಮಾನ್ ಮೌಲ್ವಿ ಫೋನ್ ಕಟ್ ಮಾಡಿದ್ದ.

ಗ್ರಾಮಸ್ಥರಿಂದ ಶೋಧ:
ಇಬಾದ್ ಕಾಣೆಯಾದ ಬಗ್ಗೆ ಗ್ರಾಮಸ್ಥರಿಗೆ ವಿಷಯ ತಿಳಿದು ಅವರೆಲ್ಲರೂ ಹುಡುಕಾಟ ಆರಂಭಿಸಿದ್ದರು. ಪೊಲೀಸರೂ ಸಮಗ್ರ ಶೋಧವನ್ನು ಪ್ರಾರಂಭಿಸಿದ್ದರು ಆರೋಪಿಗಾಗಿ ನಿರಂತರವಾಗಿ ಹುಡುಕಿದ್ದರು. ಈ ವೇಳೆ ಆರೋಪಿ ಸಲ್ಮಾನ್ ಮೌಲ್ವಿ ಸಿಮ್ ಕಾರ್ಡ್ ಬದಲಾಯಿಸುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಸೋಮವಾರ ಮಧ್ಯಾಹ್ನ ಪೊಲೀಸರು ಸಲ್ಮಾನ್ ನಿವಾಸದ ಸ್ಥಳವನ್ನು ಪತ್ತೆಹಚ್ಚಿದ್ದರು. ಈ ವೇಳೆ ಬಾಲಕನನ್ನು ಗೋಣಿ ಚೀಲದಲ್ಲಿ ತುಂಬಿಸಿ ಇಟ್ಟಿರುವುದಾಗಿ ಆತ ಒಪ್ಪಿಕೊಂಡಿದ್ದ. ನೋಡಿದರೆ ಬಾಲಕ ಗೋಣಿ ಚೀಲದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ.

ಅಪಹರಣ ಮತ್ತು ಕೊಲೆಗೆ ಸಂಬಂಧಿಸಿದಂತೆ ಸಲ್ಮಾನ್ ಜೊತೆಗೆ ಅವರ ಸಹೋದರ ಸಫುವಾನ್ ಮೌಲ್ವಿಯನ್ನು ಸಹ ಬಂಧಿಸಲಾಗಿದೆ. ಎಫ್ಐಆರ್ ದಾಖಲಿಸಲಾಗಿದೆ ಮತ್ತು ಸಲ್ಮಾನ್ ನನ್ನು ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದು. ಈ ಅನಾಗರಿಕ ಅಪರಾಧದಲ್ಲಿ ಕುಟುಂಬ ಸದಸ್ಯರು ಸೇರಿದಂತೆ ಇತರ ವ್ಯಕ್ತಿಗಳು ಭಾಗಿಯಾಗಿರುವುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಬದ್ಲಾಪುರ ಹಿರಿಯ ಪೊಲೀಸ್ ಅಧಿಕಾರಿ ಗೋವಿಂದ್ ಪಾಟೀಲ್ ತಿಳಿಸಿದ್ದಾರೆ.