ಡೈಲಿ ವಾರ್ತೆ: 26/Mar/2024

ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ನೀರು ಪಾಲು!

ಮೈಸೂರು: ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿ‌ನ ಮುತ್ತತ್ತಿಯಲ್ಲಿ ನಡೆದಿದೆ.

ಮೃತರು ಮೈಸೂರು ಮೂಲದ ನಾಗೇಶ್(40), ಭರತ್(17), ಗುರು(32), ಮಹದೇವ್(16) ಎಂದು ಗುರುತಿಸಲಾಗಿದೆ.
ಸದ್ಯ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ.

ಕುಟುಂಬಸ್ಥರು, ಸ್ನೇಹಿತರು ಸೇರಿ ಒಂದೇ ಬಸ್‌ನಲ್ಲಿ 40 ಜನ ಮೈಸೂರಿನಿಂದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ನಾಲ್ವರು ಕಾವೇರಿ ನದಿಯಲ್ಲಿ ಈಜಾಡಲು ಹೋಗಿದ್ದು, ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ರಕ್ಷಣೆ ಮಾಡಲು ಉಳಿದ ಮೂವರು ಹೋಗಿ ದುರಂತ ಅಂತ್ಯಕಂಡಿದ್ದಾರೆ.