ಡೈಲಿ ವಾರ್ತೆ: 29/Mar/2024

60 ಗೋವುಗಳ ಅಕ್ರಮ ವಧೆ: ಪೊಲೀಸರ ದಾಳಿ – 5 ಗೋವುಗಳ ರಕ್ಷಣೆ, ಸಾವಿರ ಕೆಜಿಗೂ ಅಧಿಕ ಗೋಮಾಂಸ ವಶಕ್ಕೆ

ಹಾಸನ: ಅಕ್ರಮ ಗೋಮಾಂಸ ಮಾರಾಟಕ್ಕಾಗಿ ಜಾನುವಾರುಗಳ ಮಾರಣಹೋಮ ನಡೆಸಿದ ಘಟನೆ ಹಾಸನ  ಜಿಲ್ಲೆಯ ಚನ್ನರಾಯಪಟ್ಟಣದ ಬಾಗೂರು ರಸ್ತೆ ಬಳಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ 60 ಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿರುವುದು ಪತ್ತೆಯಾಗಿದೆ.

ಗೋವುಗಳ ಹತ್ಯೆ ವಿಚಾರ ತಿಳಿದ ಕೂಡಲೇ ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಅಷ್ಟರಲ್ಲೇ ಕರುಗಳು ಸೇರಿದಂತೆ 60ಕ್ಕೂ ಹೆಚ್ಚು ಜಾನುವಾರಗಳನ್ನು ಹತ್ಯೆ ಮಾಡಿ ರುಂಡಗಳನ್ನು ಬೇರ್ಪಡಿಸಿ, ಕೈಕಾಲುಗಳನ್ನು ಕತ್ತರಿಸಿ, ಚರ್ಮ ಸುಲಿದು ನೇತು ಹಾಕಲಾಗಿತ್ತು. ಸದ್ಯ, ಐದು ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದು, ಸಾವಿರ ಕೆಜಿಗೂ ಅಧಿಕ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಕೆರೆಗೆ ಹರಿದ ಗೋವುಗಳ ರಕ್ತ!
ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೋವುಗಳ ಮಾರಣಹೋಮ ನಡೆದಿದೆ. ಗೋವುಗಳನ್ನು ಹತ್ಯೆ ಮಾಡಿದ ನಂತರ ಗೋಹಂತಕರು ಗೋವುಗಳ ರಕ್ತವನ್ನು ಪಕ್ಕದ ಕೆರೆಗೆ ಹರಿಸಿದ್ದಾರೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಗೋಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ.