ಡೈಲಿ ವಾರ್ತೆ: 29/Mar/2024

ಬಂಟ್ವಾಳ ಕಾಂಗ್ರೆಸ್ ಕಾರ್ಯಕರ್ತರ ಸಭೆ:ಪಕ್ಷ ಹಾಗೂ ನಾಯಕರ ಆಶಯಕ್ಕೆ ಧಕ್ಕೆಯಾಗದಂತೆ, ಲೋಕಸಭೆಯಲ್ಲಿ ಜನ ಸಾಮಾನ್ಯರ ಧ್ವನಿಯಾಗುವೆ –
ಅಭ್ಯರ್ಥಿ ಪದ್ಮರಾಜ್ ಆರ್.

ಬಂಟ್ವಾಳ : ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಬಿ.ಸಿ. ರೋಡ್ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.

      ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ಪದ್ಮರಾಜ್ ಆರ್. ಮಾತನಾಡಿ, ನಲ್ವತ್ತು ವರ್ಷದಲ್ಲಿ ಕಾಂಗ್ರೆಸ್ ನಾಯಕರು ಹಲವು ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ. ಇದರಲ್ಲಿ ಬಂದರು, ಏರ್ ಪೋರ್ಟ್, ಎನ್.ಎಂ.ಪಿ.ಟಿ., ಕೆ.ಪಿ.ಟಿ.ಸಿ.ಎಲ್. ಹೀಗೆ ಅನೇಕ ಯೋಜನೆಗಳು ಜಿಲ್ಲೆಗೆ ಬಂದಿದ್ದರೆ ಅದಕ್ಕೆ ಕಾಂಗ್ರೆಸ್ ನಾಯಕರು ಕಾರಣ. ನಂತರದ ಮೂವತ್ತ ಮೂರು ವರ್ಷದಲ್ಲಿ ಬಿಜೆಪಿ ನಾಯಕರು ಏನು ಮಾಡಿದ್ದಾರೆ ಎನ್ನುವುದು ನಿಮಗೆ ತಿಳಿದಿದೆ. ಹಾಗಾಗಿ ಜನರ ಬಳಿಗೆ ಹೋಗುವಾಗ ಧೈರ್ಯದಿಂದ ಹೋಗಿ, ಮತ ಕೇಳಿ. ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ ಎಂದರು.

 

ತಾನು ಬಡ ಕುಟುಂಬದಿಂದ ಬಂದವನು. ತಂದೆ -ತಾಯಿ ನಮಗೆ ಕೊಟ್ಟಿರುವ ದೊಡ್ಡ ಆಸ್ತಿ ಎಂದರೆ ಶಿಕ್ಷಣ. ನಾನು ವಕೀಲನಾದೆ. ಅದರ ಜೊತೆಗೆ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡೆ. ಇದೀಗ ನಾಯಕರು ನನ್ನನ್ನು ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಅವರ ಆಶಯಕ್ಕೆ ಧಕ್ಕೆ ಆಗದಂತೆ, ಕಾರ್ಯಕರ್ತರ ಬೆನ್ನೆಲುಬಾಗಿ ಕೆಲಸ ನಿರ್ವಹಿಸುತ್ತೇನೆ ಎಂದರು.

    ದ.ಕ.ಜಿಲ್ಲಾ ಚುನಾವಣಾ ಉಸ್ತುವಾರಿ, ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಬಡವರ ಪರವಾಗಿ ಕಾಂಗ್ರೆಸ್ ಯಾವತ್ತೂ ನಿಂತಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದೆ ಎಂದರು.

     ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ರಾಜ್ಯ ಸರಕಾರದ ಗ್ಯಾರೆಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮನೆಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸುವಂತೆ ಕರೆ ನೀಡಿದರು. ಅಭ್ಯರ್ಥಿ ಪದ್ಮರಾಜ್ ಆರ್. ಅವರನ್ನು ಗೆಲ್ಲಿಸಿಕೊಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

    ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್,   ಸುಧೀಪ್ ಕುಮಾರ್ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್ ಕೆ.ಪಿ., ಪಕ್ಷ ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್,  ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಅಶ್ವಿನಿ ಕುಮಾರ್ ರೈ, ಬಿ.ಎಂ.ಅಬ್ಬಾಸ್ ಅಲಿ, ಕೆ.ಪದ್ಮನಾಭ ರೈ, ಸುದರ್ಶನ್ ಜೈನ್, ಸುಭಾಶ್ಚಂದ್ರ ಶೆಟ್ಟಿ, ಜಯಂತಿ ಪೂಜಾರಿ, ಸುರೇಶ್ ಕುಲಾಲ್ ನಾವೂರು,  ಅಲ್ಬರ್ಟ್ ಮಿನೇಜಸ್, ನಾರಾಯಣ ನಾಯ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.