ಡೈಲಿ ವಾರ್ತೆ: 29/Mar/2024

ಆನೇಕಲ್‌ನ ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ: ಬಾಂಬ್ ನಿಷ್ಕ್ರಿಯ, ಶ್ವಾನ ದಳ ದೌಡು

ಬೆಂಗಳೂರು ಗ್ರಾಮಾಂತರ: ಇತ್ತೀಚೆಗೆ ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ ಆನೇಕಲ್ ತಾಲ್ಲೂಕಿನ ಹುಲಿಮಂಗಲ ಸಮೀಪದ ಟ್ರೀಮಿಸ್ ವರ್ಲ್ಡ್ ಸ್ಕೂಲ್ಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಶಾಲಾ ಕೊಠಡಿಯ ಡೆಸ್ಕ್ ಕೆಳಗಡೆ ಬಾಂಬ್ ಇಟ್ಟಿರುವುದಾಗಿ ಸಂದೇಶ ರವಾನಿಸಿದ ಹಿನ್ನಲೆ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಶ್ವಾನ ದಳದವರು ಇಡೀ ಶಾಲೆಯನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ಶಾಲೆಯಲ್ಲಿ ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿಲ್ಲ. ಬಳಿಕ ಬಾಂಬ್ ಕರೆಗೆ ಬೆಚ್ಚಿ ಬಿದ್ದಿದ್ದ ಶಾಲೆ ಆಡಳಿತ ಮಂಡಳಿ ನಿಟ್ಟಿಸಿರು ಬಿಟ್ಟಿದೆ.

ಇನ್ನು ಇದೇ ಮಾ.01 ರಂದು ಬೆಂಗಳೂರಿನ ಬ್ರೂಕ್ ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದಾದ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಗೃಹ ಸಚಿವ ಪರಮೇಶ್ವರ್‌ ಸೇರಿದಂತೆ ಹಲವು ನಾಯಕರಿಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿತ್ತು. ಇದೀಗ ಮತ್ತೊಂದು ಶಾಲೆಗೆ ಬೆದರಿಕೆ ಸಂದೇಶ ಬಂದಿರುವುದು ಆತಂಕ ಮೂಡಿಸಿದೆ.