ಡೈಲಿ ವಾರ್ತೆ: 04/April/2024

ಕುಡಿಯುವ ನೀರಿನ ಟ್ಯಾಂಕ್ ನಲ್ಲಿ 30 ಕೋತಿಗಳ ಶವ ಪತ್ತೆ

ಹೈದರಾಬಾದ್: ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಸುಮಾರು 30 ಕೋತಿಗಳ ಶವ ಪತ್ತೆಯಾದ ಘಟನೆ ತೆಲಂಗಾಣದ ನಾಲ್ಗೊಂಡಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ನಂದಿಕೊಂಡ ನೀರಿನ ಟ್ಯಾಂಕ್‌ ನಲ್ಲಿ ಮಂಗಗಳ ಶವಗಳು ತೇಲುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೀರಿನ ಟ್ಯಾಂಕಿನ ಮುಚ್ಚಳ ತೆರೆದಿದ್ದರಿಂದ ಮಂಗಗಳು ಒಳಗೆ ಸಿಲುಕಿ ಕೊಂಡು ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಟ್ಯಾಂಕ್‌ ನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಅಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ ದೂರು ನೀಡಿದ ನಂತರ ಪುರಸಭೆಯ ಸಿಬ್ಬಂದಿ ಸತ್ತ ಮಂಗಗಳನ್ನು ಟ್ಯಾಂಕ್‌ ನಿಂದ ತೆಗೆದಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ತೆಲಂಗಾಣ ಮಾಜಿ ಸಚಿವ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕ ಕೆಟಿ ರಾಮರಾವ್ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರೇವಂತ್ ರೆಡ್ಡಿ ಸರ್ಕಾರ ಸಾರ್ವಜನಿಕ ಆರೋಗ್ಯದ ಬದಲು ರಾಜಕೀಯಕ್ಕೆ ಆದ್ಯತೆ ನೀಡಿದೆ ಎಂದು ಹೇಳಿದ್ದಾರೆ.