ಡೈಲಿ ವಾರ್ತೆ: 06/April/2024

ಕಾಲೇಜಿನಲ್ಲಿ ಚುನಾವಣ ಪ್ರಚಾರ – ಕೋಟ ವಿರುದ್ಧ ಪ್ರಕರಣ ದಾಖಲು!

ಕಾಪು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಹಾಗೂ ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಇವರು ಕಾಲೇಜಿನಲ್ಲಿ ಚುನಾವಣ ಪ್ರಚಾರ ನಡೆಸಿದ್ದರಿಂದ ಅವರ ವಿರುದ್ಧ ಕಾಪು ಪೊಲೀಸ್‌ ಠಾಣೆಯಲ್ಲಿ ಚುನಾವಣ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

ಮಾ. 30ರಂದು ಬೆಳಗ್ಗೆ ಕಟಪಾಡಿಯ ಕಾಲೇಜೊಂದರ ಕಾಂಪೌಂಡಿನ ಒಳಗಡೆ ಕೋಟ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್‌ ಶೆಟ್ಟಿ ಹಾಗೂ ಲಾಲಾಜಿ ಆರ್‌. ಮೆಂಡನ್‌ ಅವರಿಗೆ ಕಾಲೇಜಿನ ಆಡಳಿತ ಮಂಡಳಿಯವರು ಮಾತನಾಡಲು ಹ್ಯಾಂಡ್‌ ಮೈಕ್‌ ನೀಡಿದ್ದು, ಅಲ್ಲದೇ ಕಾಲೇಜಿನ ಒಳಭಾಗದಲ್ಲಿ ಮತ್ತು ಕಾಲೇಜಿನ 2 ಮಹಡಿಯ ಕಾರಿಡಾರ್‌ನಲ್ಲಿ ವಿದ್ಯಾರ್ಥಿಗಳಿಗೆ ನಿಲ್ಲಲು ಅನುವು ಮಾಡಿಕೊಡಲಾಗಿತ್ತು. ಇದನ್ನು ಬಳಸಿಕೊಂಡ ಕೋಟ ಶ್ರೀನಿವಾಸ ಪೂಜಾರಿ ಮೈಕ್‌ ಹಿಡಿದು ಪ್ರಚಾರ ಕಾರ್ಯ ನಡೆಸುವ ಮೂಲಕ ಚುನಾವಣ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿರುವುದಾಗಿ ಕಾಪು ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್‌ನ‌ ವಿಶ್ವನಾಥ್‌ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.