ಡೈಲಿ ವಾರ್ತೆ: 21/April/2024

ಡೈಲಿ ವಾರ್ತೆ ವರದಿ: ಶಿವಾನಂದಸ್ವಾಮಿ ಆರ್.ಬಿದರಕುಂದಿ ದೊರೆ.

ಕಾರಲ್ಲಿ ₹50 ಲಕ್ಷ ಹಣ ಸಾಗಾಟ: ಮನಗೂಳಿ ಚೆಕ್‌ಪೋಸ್ಟ್‌ನಲ್ಲಿ ಮೂವರು ಯುವಕರು ವಶಕ್ಕೆ


ವಿಜಯಪುರ: (ಏ‌.21)  ಲೋಕಸಭಾ ಚುನಾವಣೆ ಶುರುವಾಗ್ತಿದ್ದಂತೆ ಖದೀಮರು ತಮ್ಮ ಅಕ್ರಮಗಳಿಗೆ ನೂರೆಂಟು ದಾರಿಗಳನ್ನ ಹುಡುಕಿಕೊಂಡಿದ್ದಾರೆ. ಚುನಾವಣೆ ನಡೆಯುತ್ತಿರೋ ಈ ಸಮಯದಲ್ಲಿ ಒಬ್ಬ ವ್ಯಕ್ತಿ 50 ಸಾವಿರಕ್ಕು ಅಧಿಕ ಹಣವನ್ನ ಇಟ್ಟುಕೊಂಡು ತಿರುಗಾಡುವಂತಿಲ್ಲ. ಆದ್ರೆ ಲಕ್ಷ ಲಕ್ಷ ಹಣವನ್ನ ಕದ್ದಮುಚ್ಚಿ ಸಾಗಿಸಲು ಯತ್ನಿಸಿದ ಯುವಕರು ಚುನಾವಣಾಧಿಕಾರಿಗಳ ಕಯ್ಯಲ್ಲಿ ಲಾಕ್ ಆಗಿದ್ದಾರೆ.

ಕಾರ್ ಡಿಕ್ಕಿಯಲ್ಲಿ ಕಂತೆ ಕಂತೆ ಹಣ ಸಾಗಿಸಲು ಯತ್ನ!
ಕದ್ದು ಮುಚ್ಚಿ 50 ಲಕ್ಷ ಹಣವನ್ನ ಕಾರಿನ ಡಿಕ್ಕಿಯಲ್ಲಿ ಸಾಗಾಟ ಮಾಡ್ತಿದ್ದ ಮೂವರು ಚೆಕ್‌ ಪೋಸ್ಟ್‌ ನಲ್ಲಿ ಸಿಕ್ಕಿಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ನಡೆದಿದೆ. ಖಚಿತ ಮಾಹಿತಿ ಆಧರಿಸಿ ಚುನಾವಣಾಧಿಕಾರಿಗಳು ಮನಗೂಳಿ ಚೆಕ್‌ ಪೋಸ್ಟ್‌ ಬಳಿ ಕೆಎ 18 M 6462 ಕಾರನ್ನ ತಪಾಸಣೆ ಮಾಡಿದ್ದಾರೆ. ಈ  ವೇಳೆ ಕಾರಿನ ಡಿಕ್ಕಿಯ ಸ್ಟೆಪ್ನಿ ಕೆಳಗೆ ಕಂತೆ ಕಂತೆ ಹಣ ಪತ್ತೆಯಾಗಿವೆ. ಸ್ಥಳಕ್ಕೆ ಉಪ ಚುನಾವಣಾಧಿಕಾರಿ ಗಂಗಪ್ಪ ಎಮ್, ಬಸವನ ಬಾಗೇವಾಡಿ ತಹಶಿಲ್ದಾರ್ ವೈ ಎಸ್ ಸೋಮಣಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಜ್ಜಂಪುರಕ್ಕೆ ಹಣ ಸಾಗಿಸುತ್ತಿದ್ದ ಯುವಕರು!
ಮನಗೂಳಿ ಚೆಕ್ ಪೋಸ್ಟ್ ‌ಲ್ಲಿ ಹಣದ ಸಮೇತ ಮೂವರು ಯುವಕರು ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳ ವಿಚಾರಣೆ ವೇಳೆ ತಾವು ವಿಜಯಪುರದಿಂದ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರಕ್ಕೆ ಹೊರಟಿದ್ದಾಗಿ ಯುವಕರು ಹೇಳಿಕೊಂಡಿದ್ದಾರೆ‌. ಯುವಕರನ್ನ ಚಿಕ್ಕಮಗಳೂರು ಜಿಲ್ಲೆಯ ತರಿಕೇರೆ, ಕಡೂರು ಮೂಲದ  ರಕ್ಷಿತ್‌, ಪ್ರಭು, ಗೋಪಾಲ್‌ ಎನ್ನಲಾಗಿದೆ. ವಿಜಯಪುರದಿಂದ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರಕ್ಕೆ ಹಣ ಸಾಗಿಸೋಕೆ ಪ್ಲಾನ್ ಹಾಕಿಕೊಂಡ ಮೂವರು ಮನಗೂಳಿ ಮೂಲಕ ತೆರಳಿವಾಗ ಸಿಕ್ಕಿಬಿದ್ದಿದ್ದಾರೆ. ಇನ್ನೂ ಯಾವ ಕಾರಣಕ್ಕೆ ಹಣವನ್ನ ಸಾಗಾಟ ಮಾಡ್ತಿದ್ದರು, ಯಾರಿಂದ ಹಣವನ್ನ ಪಡೆದುಕೊಂಡು ಹೋಗ್ತಿದ್ದರು ಎನ್ನುವ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ ಎನ್ನಲಾಗಿದೆ.

ಆದಾಯ ತೆರಿಗೆ ಇಲಾಖೆಗೆ ಪ್ರಕರಣ ಹಸ್ತಾಂತರ!
ಚುನಾವಣೆ ಸಂದರ್ಭದಲ್ಲಿ ದಾಖಲೆ ಇಲ್ಲದ ಹಣ ಪತ್ತೆಯಾದ್ರೆ, ಆ ಹಣ 10 ಲಕ್ಷಕ್ಕು ಅಧಿಕವಾಗಿದ್ದ ಪ್ರಕರಣವನ್ನ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತೆ. ಈ ಪ್ರಕರಣದಲ್ಲಿ 50 ಲಕ್ಷ 50 ಹಣ ಪತ್ತೆಯಾಗಿರುವ ಕಾರಣ ಚುನಾವಣಾಧಿಕಾರಿಗಳು ಪ್ರಕರಣವನ್ನ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದ್ದಾರೆ‌.