ಡೈಲಿ ವಾರ್ತೆ: 23/April/2024

ಬಿಜೆಪಿ ಯಿಂದ ನಿರ್ಲಕ್ಷ: ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

ಹುಬ್ಬಳ್ಳಿ: ವಿಧಾನಪರಿಷತ್ತು ಬಿಜೆಪಿ‌ ಸದಸ್ಯ ಕೆ.ಪಿ.ನಂಜುಂಡಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ನಾಳೆ ಬೆಳಿಗ್ಗೆ 10:00ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.

ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ. ಹುಬ್ಬಳ್ಳಿಯಲ್ಲಿನ‌ ಸಭಾಪತಿಯವರ ಗೃಹ ಕಚೇರಿಗೆ ಆಗಮಿಸಿ ತಮ್ಮ ರಾಜೀನಾಮೆ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಿದರು, ನನ್ನನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಿಲ್ಲ. ಅಮರಶಿಲ್ಪಿ ಜಕಣಾಚಾರಿ ಅವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮ ಮಾಡಿದ್ದು ಬಿಟ್ಟರೆ ಬೇರೇನು ಮಾಡಲಿಲ್ಲ. ನಾನು ಪಕ್ಷ ಸೇರುವಾಗ ಯಡಿಯೂರಪ್ಪ ಅವರು ಹಿಂದುಳಿದ ಸಮಾಜಗಳಿಗೆ 1000 ಕೋಟಿ ಕೊಡುವುದಾಗಿ ಹೇಳಿದ್ದರು ಏನು ನೀಡಲಿಲ್ಲ. ನನಗೆ ಸಚಿವನಾಗುವ ಅರ್ಹತೆ ಇದೆ. ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ ನನ್ನ ಮನೆಗೆ ಬಂದು ಹೋದ ನಂತರವೂ ಬಿಜೆಪಿಯವರು ಯಾರೊಬ್ಬರು ನನ್ನ ಮಾತನಾಡಿಸಿಲ್ಲ. ಯಾವ ನಿರೀಕ್ಷೆ ಇರಿಸಿಕೊಂಡು ಬಿಜೆಪಿಗೆ ಹೋಗಿದ್ದೇನೊ ಸಮಾಜ ಹಾಗೂ ಹಿಂದುಳಿದ ಸಮಾಜಗಳ ಹಿತ ದೃಷ್ಟಿಯಿಂದ ಅದು ಈಡೇರಲಿಲ್ಲ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಇಂದೇ ರಾಜೀನಾಮೆ ನೀಡುವೆ ಎಂದರು.