ಡೈಲಿ ವಾರ್ತೆ: 24/April/2024

ಕುಂದಾಪುರ ಬ್ಲಾಕ್ ಕಾಂಗ್ರೆಸ್‌ ವತಿಯಿಂದ ನಗರದಲ್ಲಿ ಬೃಹತ್ ಪಾದಯಾತ್ರೆ: ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಮತಯಾಚನೆ-ಅಭಿವೃದ್ಧಿಗೆ ನಿಮ್ಮ ಮತ ನೀಡಿ: ಜಯಪ್ರಕಾಶ್‌ ಹೆಗ್ಡೆ

ಕುಂದಾಪುರ: ಜನರ ನಡುವೆ ನಿಂತು ಅವರ ಸಮಸ್ಯೆಗಳನ್ನು ಅಲಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಕಾನೂನಾತ್ಮಕವಾಗಿ ಶ್ರಮಿಸಿದ್ದೇನೆ. ಅಭಿವೃದ್ಧಿ ಕಾರ್ಯಕಗಳ ಬಗ್ಗೆ ಮಾತನಾಡಲು ಇನ್ನೂ ಕಾಲಾವಕಾಶದ ಅಗತ್ಯವಿದೆ. ನೀವು ನನ್ನ ಮೇಲಿಟ್ಟ ಪ್ರೀತಿಗೆ ಸದಾ ಚಿರಋಣಿ. ನೀವು ನನಗೆ ಮತ್ತೊಮ್ಮೆ ಅವಕಾಶವನ್ನು ಕಲ್ಪಿಸಿದರೆ ಇನ್ನಷ್ಟು ಕೆಲಸಗಳನ್ನು ಮಾಡುತ್ತೇನೆಂದು ಈ ಮೂಲಕ ಭರವಸೆ ನೀಡುತ್ತೇವೆ. ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಅಭಿವೃದ್ಧಿ ಕಾರ್ಯಗಳ ಕಡೆಗೆ ಗಮನಹರಿಸಿ, ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ನಿಮ್ಮ ಮತವನ್ನು ಚಲಾಯಿಸಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.
ಅವರು ಕುಂದಾಪುರದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು. “ಇಂದು ಪ್ರಚಾರದ ಕೊನೆಯ ದಿನ. ಅದೂ ನನ್ನೂರಿನಲ್ಲೇ ಕೊನೆಗೊಳ್ಳುತ್ತಿರುವುದು ನಿಮ್ಮೊಂದಿಗೆ ಮಾತನಾಡಲು ಮತ್ತೊಂದು ಸುವರ್ಣಾವಕಾಶ ಸಿಕ್ಕಿರುವುದು ಸಂತಸದ ವಿಷಯ. ಕ್ಷೇತ್ರದಲ್ಲಿ ಮತಯಾಚನೆ ಮಾಡುವಾಗ ಉತ್ತಮ ರೀತಿಯಲ್ಲಿ ಬೆಂಬಲ ನೀಡಿದ್ದಾರೆ. ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಉಡುಪಿ ಜಿಲ್ಲೆಯ ರಚನೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಗಾಗಿ ಮನೆಯ ಮೇಲೆ ಸಾಲ ಮಾಡಿದ್ದು, ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿದ್ದು, ಮೀನುಗಾರರ ಬದುಕಿಗೆ ನೆರವಾಗಿದ್ದು, ರಸ್ತೆ, ಸೇತುವೆ, ಫ್ಲೈಓವರ್‌, ಆಶ್ರಯ ಮನೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ನನ್ನ ಮನದಾಳದಲ್ಲಿ ಹಾದುಹೋಗಿದೆ. ಆ ಅಭಿವೃದ್ಧಿ ಕಾಮಗಾರಿಗಳನ್ನೇ ಜನರ ಮುಂದಿಟ್ಟಿರುವೆ. ಮುಂದೇನು ಮಾಡಬೇಕೆಂಬುದರ ಬಗ್ಗೆ ಜನರಲ್ಲಿ ನನ್ನದೇ ಆದ ಪ್ರಣಾಳಿಕೆಯನ್ನು ನೀಡಿರುವೆ,” ಎಂದರು.
ʼಒಬ್ಬ ಜನಪ್ರತಿನಿಧಿಯಾಗಿ ಜನರ ನಡುವೆ ನಿಂತು ಅವರ ಸಮಸ್ಯೆಗಳನ್ನು ಆಲಿಸಿರುವೆ. ಅದಕ್ಕೆ ಸಮರ್ಪಕ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವಲ್ಲಿ ಶ್ರಮಿಸಿರುವೆ. ಮತ ಕೇಳುವಾಗಲೂ ಯಾವುದೇ ನಾಯಕರ ಹೆಸರನ್ನು ಮುಂದಿಟ್ಟುಕೊಂಡು ಕೇಳಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ನೀಡಿರುವ ಗ್ಯಾರೆಂಟಿ ಯೋಜನೆಗಳು ಜನರಿಗೆ ತಲುಪಿರುವುದು ಖುಷಿಕೊಟ್ಟಿದೆ. ಬಡಜನರ ಮೊಗದಲ್ಲಿ ನೆಮ್ಮದಿ ಕಾಣುತ್ತಿರುವುದು ಸಂತಸ ವಿಷಯ.” ಎಂದರು.
“ಜನರ ಸಮಸ್ಯೆಗಳನ್ನು ಆಲಿಸಲು ಜನರಲ್ಲಿಗೇ ಹೋಗಲು ಹೆಚ್ಚಾಗಿ ಪ್ರಯತ್ನಿಸಿರುವೆ. ಇಲ್ಲವಾದಲ್ಲಿ ದೂರವಾಣಿ ಮೂಲಕ ಅವರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಪರಿಹಾರ ಕಂಡುಕೊಂಡು ಪುನಃ ಕೆಲಸ ಆದ ಬಗ್ಗೆ ಅವರಿಗೆ ದೂರವಾಣಿ ಮೂಲಕ ತಿಳಿಸಿರುವೆ. ಜನರ ಸಮಸ್ಯೆಗಳಿಗೆ ಕಾನೂನಿನ ತೊಡಕಾದಾಗ ಆ ಬಗ್ಗೆ ಸ್ವತಃ ಅಧ್ಯಯನ ಮಾಡಿ, ಅಧಿಕಾರಿಗಳಿಗೆ ಮನದಟ್ಟು ಸಮಸ್ಯೆಗೆ ಪರಿಹಾರ ಕಂಡಿರುವೆ. ಈ ಎಲ್ಲ ಕೆಲಸಗಳು ಪ್ರಜ್ಞಾವಂತ ಮತದಾರರಲ್ಲಿ ಅರಿವು ಮೂಡಿಸಲಿದೆ ಎಂಬ ನಂಬಿಕೆ ಇದೆ,” ಎಂದು ಜಯಪ್ರಕಾಶ್‌ ಹೆಗ್ಡೆ ನುಡಿದರು.


ಮಾಜಿ ಶಾಸಕ ಗೋಪಾಲ ಪೂಜಾರಿ ಅವರು ಮಾತನಾಡಿ, “ಬಿಜೆಪಿ ಸ್ಪರ್ಧಿ ಕೋಟ ಶ್ರೀನಿವಾಸ ಪೂಜಾರಿ ನನ್ನನ್ನು ಭಯೋತ್ಪಾದಕ ಎಂದು ನಿಂದಿಸಿದರು. ಅವರಿಗೆ ಕ್ಷೇತ್ರದ ಜನ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ. ರಾಜಕೀಯದಲ್ಲಿ ಬರೇ ಸುಳ್ಳು ಹೇಳಿಕೊಂಡು ಅವರಿವರ ನಡುವೆ ವಿರೋಧ ಹುಟ್ಟುಹಾಕಿದ ಶ್ರೀನಿವಾಸ ಪೂಜಾರಿ ಈ ಬಾರಿ ಸೋಲಿಸಬೇಕಾದ ಅನಿವಾರ್ಯತೆ ಇದೆ,” ಎಂದು ಹೇಳಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕ ಸುಕುಮಾರ್‌ ಶೆಟ್ಟಿ, ಕೆಪಿಸಿಸಿಯ ಎಂ.ಎ. ಗಫೂರ್‌ ಹಾಗೂ ಇತರ ಗಣ್ಯರು ಹಾಜರಿದ್ದರು.
ಮೊದಲಿಗೆ ಕುಂದಾಪುರ ಶಾಸ್ತ್ರೀ ಸರ್ಕಲ್‌ನಿಂದ ಹಳೆ ಬಸ್‌ ನಿಲ್ದಾಣದವರೆಗೆ ತೆರೆದ ವಾಹನದಲ್ಲಿ ಜಯಪ್ರಕಾಶ್‌ ಹೆಗ್ಡೆ ಅವರು ಜಾಥಾದಲ್ಲಿ ಪಾಲ್ಗೊಂಡರು. ನೆರೆದ ಸಹಸ್ರಾರು ಕಾಂಗ್ರೆಸ್‌ ಅಭಿಮಾನಿಗಳು ಜೈಕಾರ ಹಾಕುತ್ತ ಜಯಪ್ರಕಾಶ್‌ ಹೆಗ್ಡೆ ಅವರ ಜಯಕ್ಕಾಗಿ ಹಾರೈಸಿದರು.