ಡೈಲಿ ವಾರ್ತೆ: 24/April/2024

ಕಾಂಗ್ರೆಸ್ ಗ್ಯಾರಂಟಿಗಳು ಜನರ ಕೈಯಲ್ಲಿದ್ದರೆ, ಮೋದಿ ಗ್ಯಾರಂಟಿ ಕೇವಲ ಬಿಜೆಪಿಯವರ ಬಾಯಲ್ಲಿ ಮಾತ್ರ ಇದೆ ; ಬಿ.ರಮಾನಾಥ ರೈ

ಬಂಟ್ವಾಳ : ಕಾಂಗ್ರೆಸ್ ಗ್ಯಾರಂಟಿಗಳು ಜನರ ಕೈಯಲ್ಲಿದ್ದರೆ, ಮೋದಿ ಗ್ಯಾರಂಟಿ ಕೇವಲ ಬಿಜೆಪಿಯವರ ಬಾಯಲ್ಲಿ ಮಾತ್ರ ಇದೆ. ನುಡಿದಂತೆ ನಡೆಯುವ ಪಕ್ಷ ಹಾಗೂ ಸರಕಾರ ಇದ್ದರೆ ಅದು ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ನೇತೃತ್ವದ ಸರಕಾರ ಮಾತ್ರವಾಗಿದೆ ಎಂದು ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಜಿಲ್ಲಾ ಪ್ರಚಾರ ಉಸ್ತುವಾರಿ, ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.

   

ರಮಾನಾಥ ರೈ ಅವರ ನೇತೃತ್ವದಲ್ಲಿ ಪಾಣೆಮಂಗಳೂರು  ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಪಾಣೆಮಂಗಳೂರು ವಲಯ ಕಾಂಗ್ರೆಸ್, ಯುವ ಕಾಂಗ್ರೆಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಇವುಗಳ ಸಹಕಾರದೊಂದಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರ ಪರವಾಗಿ ಬುಧವಾರ ಸಂಜೆ ಮೆಲ್ಕಾರ್ ಜಂಕ್ಷನ್ನಿನಿಂದ ಸಜಿಪಮೂಡ ಗ್ರಾಮದ ಸುಭಾಶ್ ನಗರ (ಬೇಂಕೆ) ವರೆಗೆ ನಡೆದ ರೋಡ್ ಶೋ ಬಳಿಕ  ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    

ಬಿಜೆಪಿ ಅಧಿಕಾರಕ್ಕೆ ಬರುವ ಮುಂಚೆ ಮಾತನಾಡಿದಕ್ಕೂ ಬಂದ ಬಳಿಕ ನಡೆದುಕೊಂಡ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ನುಡಿದಂತೆ ಯಾವುದನ್ನೂ ಮಾಡಿಲ್ಲ. ಬಿಜೆಪಿ ಸರಕಾರ ಸಂಪೂರ್ಣ ವಚನಭ್ರಷ್ಟ ಸರಕಾರವಾಗಿದೆ.  ಆಧಾರ್, ಉದ್ಯೋಗ ಖಾತರಿ ಯೋಜನೆಗಳ ಬಗ್ಗೆ ಟೀಕಿಸಿ ಅದನ್ನೇ ಮುಂದುವರಿಸಿದರು. ಅವೈಜ್ಞಾನಿಕ
ಜಿ.ಎಸ್.ಟಿ ಜಾರಿ, ಕಾಂಗ್ರೆಸ್ ಪಕ್ಷದಲ್ಲಿದ್ದ ವೇಳೆ ಭ್ರಷ್ಟ ಆಗಿದ್ದವರು ಬಿಜೆಪಿ ಸೇರಿದ ಬಳಿಕ ಶುದ್ದರಾಗುವ ಸಿದ್ದಾಂತವನ್ನು ಮೈಗೂಡಿಸಿಕೊಳ್ಳಲಾಗಿದೆ. ಜನರನ್ನು ವಿಭಜಿಸಿ ಸಾವು ಹಾಗೂ ಜೈಲು ಹಾದಿ ತೋರಿದ ಸಾಧನೆ ಬಿಟ್ಟರೆ ಬಿಜೆಪಿಗರು ಮಾಡಿದ್ದು ಶೂನ್ಯ ಎಂದು ಟೀಕಿಸಿದ ಅವರು ಇಂತಹ ಆಡಳಿತ ಮುಂದುವರಿದರೆ ಪ್ರಜಾಪ್ರಭುತ್ವವೇ ಉಳಿದೀತಾ ಎಂಬ ಸಂಶಯ ಬರುತ್ತಿದೆ ಎಂದು  ಆತಂಕ ವ್ಯಕ್ತಪಡಿಸಿದರು.

  

ಮಹಿಳೆಯರು ಯಾವತ್ತೂ ಕೃತಘ್ನರಲ್ಲ. ನಾವು ಏನಿದ್ದರೂ ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಪರ ಎಂಬ ಮಾತು ಕ್ಷೇತ್ರ ಸಂಚಾರದ ವೇಳೆ ಮಹಿಳೆಯರಿಂದ ಕೇಳಿ ಬಂದಿದೆ. ಮಹಿಳೆಯರ ಈ ಕೃತಜ್ಞತೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಬಂದರೆ ಕೇಂದ್ರದ ಗ್ಯಾರಂಟಿಯೂ ನೀಡಿಯೇ ಸಿದ್ದ. ಆ ಮೂಲಕ ನಾವು ಕೂಡಾ ಮಹಿಳೆಯರ ಋಣ ತೀರಿಸುತ್ತೇವೆ ಎಂದು ಭರವಸೆ ನೀಡಿದರು, ಸ್ವಾಭಿಮಾನದ ಬದಕು ಕೊಟ್ಟ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ಮುಂದೆಯೂ ಯಾವತ್ತೂ ಜನಪರವಾಗಿ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ. ಸಾಲಮನ್ನಾ ಮಾಡುವ ಮೂಲಕ ಜನರನ್ನು ಋಣಮುಕ್ತ ಮಾಡಿದ ಕೀರ್ತಿ ಸಿದ್ದರಾಮಯ್ಯ ಸರಕಾರಕ್ಕಿದೆ. ಜನ ನಿತ್ಯ ಜೀವನದಲ್ಲಿ ಪಡೆಯುತ್ತಿರುವ ಎಲ್ಲ ಸೌಲಭ್ಯ ನೀಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.

  

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಾರ್ದನ ಪೂಜಾರಿ ಅವರಿಗೆ 9 ಬಾರಿ, ವಿನಯ ಕುಮಾರ್ ಸೊರೆಕೆ ಅವರಿಗೆ 2 ಬಾರಿ ಸಹಿತ ಇದೀಗ 12ನೇ ಬಾರಿ ಬಿಲ್ಲವರಿಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಅವಕಾಶ ನೀಡಿದ್ದು, ವಿದ್ಯಾವಂತ, ನ್ಯಾಯವಾದಿ, ಹಲವು ಭಾಷಾ ಜ್ಞಾನ ಹೊಂದಿರುವ ಹಾಗೂ ಸಂಸತ್ತಿನಲ್ಲಿ ದ್ವನಿ ಎತ್ತಬಲ್ಲ 
ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ   ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು .

  ಚುನಾವಣಾ ವಾರ್ ರೂಂ ಮುಖ್ಯಸ್ಥ, ನೋಟರಿ-ನ್ಯಾಯವಾದಿ ಎಂ ಅಶ್ವನಿ ರೈ ಮಾತನಾಡಿ, ಬಿಜೆಪಿಗರು ಸುಳ್ಳು ಹೇಳಿಯೇ ಹತ್ತು ವರ್ಷಗಳನ್ನು ಕಳೆದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಇಲ್ಲದೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ, ಕೇವಲ ಭಾವನಾತ್ಮಕ ವಿಷಯಗಳು, ಜಾತಿ-ಧರ್ಮಗಳ ವಿಭಜನೆಯ ಮೂಲಕವೇ ಅಧಿಕಾರ ನಡೆಸಿದ ಬಿಜೆಪಿ ದೇಶವನ್ನು ಅಧೋಗತಿಗೆ ಕೊಂಡುಹೋಗಿದೆ. ಕಾಂಗ್ರೆಸ್ ಸರಕಾರ ಗ್ಯಾರಂಟಿ ತಕ್ಷಣ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದ ಖ್ಯಾತಿ ಪಡೆದಿದೆ. ಈ ನಿಟ್ಟಿನಲ್ಲಿ ಕಾಂಗೆಸ್ ನ ಕೈ ಬಲಪಡಿಸುವ ಸಲುವಾಗಿ ಪದ್ಮರಾಜ್ ಅವರನ್ನು ಗೆಲ್ಲಿಸುವ ಮೂಲಕ ಮತ್ತೆ ಅಭಿವೃದ್ದಿ ಯುಗ ಆರಂಭವಾಗಲಿ ಎಂದರು .
.
     ಇದೇ ವೇಳೆ ಸಜಿಪಮೂಡ ವಲಯ  ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ ರಮಾನಾಥ ರೈ ಅವರಿಗೆ ಬೃಹತ್ ಹಾರ ಹಾಕಿ ಗೌರವಿಸಲಾಯಿತು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಯೋಜಕ ಹಾಗೂ ವೀಕ್ಷಕ ಪಿಯೂಸ್ ಎಲ್ ರೋಡ್ರಿಗಸ್, ಬಂಟ್ವಾಳ ಕ್ಷೇತ್ರದ ಚುನಾವಣಾ ಪ್ರಚಾರ ಉಸ್ತುವಾರಿ, ಕೆಪಿಸಿಸಿ ಸದಸ್ಯ, ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪ್ರಮುಖರಾದ ಪದ್ಮಶೇಖರ್ ಜೈನ್, ಬಿ ಎಂ ಅಬ್ಬಾಸ್ ಅಲಿ, ಸಂಜೀವ ಪೂಜಾರಿ, ಅನ್ವರ್ ಕರೋಪಾಡಿ, ಮುಹಮ್ಮದ್ ಶರೀಫ್ ಶಾಂತಿ ಅಂಗಡಿ, ಸುದರ್ಶನ್ ಜೈನ್, ಕೆ ಪದ್ಮನಾಭ ರೈ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಜನಾರ್ದನ ಚೆಂಡ್ತಿಮಾರ್, ಜಯಂತಿ ಪೂಜಾರಿ, ಶೋಭಿತ್ ಪೂಂಜಾ, ಶೋಭಾ ಶೆಟ್ಟಿ,  ಯೂಸುಫ್ ಕರಂದಾಡಿ, ಪಿ ಎಸ್ ಮೊಹಮ್ಮದ್ ಇಕ್ಬಾಲ್ ಜೆಟಿಟಿ,  ಇಬ್ರಾಹಿಂ ನವಾಝ್ ಬಡಕಬೈಲು, ಕರೀಂ ಬೊಳ್ಳಾಯಿ, ರಾಜೇಶ್ ರೋಡ್ರಿಗಸ್, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ, ಶರೀಫ್ ಭೂಯಾ, ಜೆಸಿಂತಾ ಡಿ’ಸೋಜ, ರಝಾಕ್ ಕುಕ್ಕಾಜೆ, ಗಾಯತ್ರಿ ಪ್ರಕಾಶ್, ಶಬೀರ್ ಎಸ್, ಮುಹಮ್ಮದ್ ನಂದಾವರ, ಸಿದ್ದೀಕ್ ಸರವು, ಅಲ್ತಾಫ್ ಕುಳಾಯಿ, ಸಿರಾಜ್ ಮದಕ, ಎಂ.ಎಚ್. ಮುಸ್ತಫಾ ಬೋಳಂಗಡಿ ಮೊದಲಾದವರು ಭಾಗವಹಿಸಿದ್ದರು.