ಡೈಲಿ ವಾರ್ತೆ: 05/ಮೇ /2024

ಚಿಕ್ಕಮಗಳೂರು: ಪ್ರವಾಸಕ್ಕೆ ಬಂದಿದ್ದ ಬಾಲಕಿ ಭದ್ರಾನದಿಯ ನೀರಿನಲ್ಲಿ ಮುಳುಗಿ ಮೃತ್ಯು

ಚಿಕ್ಕಮಗಳೂರು: ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದ 12 ವರ್ಷದ ಬಾಲಕಿ ಭದ್ರಾ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.

ತಮಿಳುನಾಡಿನ ಹಸೂರಿನಿಂದ ಕುಟುಂಬವೊಂದು ಕಳಸ ಹೊರನಾಡು‌ ಪ್ರವಾಸಕ್ಕೆ ಬಂದಿದ್ದರು. ಶನಿವಾರ ಬೆಳಿಗ್ಗೆ ಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಜಾಹ್ನವಿ (12 ವ) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.

ಕಳಸ-ಹೊರನಾಡು ರಸ್ತೆ ಮಧ್ಯೆ ಸಿಗುವ ಭದ್ರಾ ನದಿಯ ಹೆಬ್ಬಾಳೆಯಲ್ಲಿ ಸ್ನಾನ ಮಾಡಿ ಅನ್ನಪೂರ್ಣೇಶ್ವರಿ ದೇವರ ದರ್ಶನ ಮಾಡಲು ಕುಟುಂಬದವರು ಮುಂದಾಗಿದ್ದು, ಕುಟುಂಬದವರೆಲ್ಲ ನೀರಿನಲ್ಲಿ ಇಳಿದು ಸ್ನಾನ ಮಾಡುತ್ತಿದ್ದಾಗ ಜಾಹ್ನವಿ ನೀರಿನಲ್ಲಿ ಮುಳುಗಿದ್ದಾಳೆ.
ತಕ್ಷಣ ಕುಟುಂಬದವರು ಜಾಹ್ನವಿಯನ್ನು ನೀರಿನಿಂದ ಮೇಲೆ ಎತ್ತಿದರೂ ಬಾಲಕಿ ತೀವ್ರ ಅಸ್ವಸ್ಥಳಾಗಿ ಮೃತಪಟ್ಟಿದ್ದಾಳೆ.
ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.