ಡೈಲಿ ವಾರ್ತೆ: 07/ಮೇ /2024

ಇಂದು ಮತದಾನ ಬಳಿಕ ನಡೆದ ಕೆಲವು ಸಾವು ನೋವುಗಳು ವಿವರ

ಲೋಕಸಭಾ ಚುನಾವಣೆ ಕರ್ನಾಟಕದ 14 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆದಿದೆ. ಈ ವೇಳೆ ಕೆಲ ಸಾವು ನೋವುಗಳು ಸಂಭವಿಸಿವೆ.

ಮತ ಹಾಕಲು ತೆರಳುತ್ತಿದ್ದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ನಡೆದಿದೆ. ಖಾಸಗಿ ಬಸ್ಗೆ ಡಿಕ್ಕಿಯಾಗಿ ಬೈಕ್ ಸವಾರ ದುರ್ಮರಣ ಹೊಂದಿದ್ದಾರೆ. ಮಂಜುನಾಥ್(32) ಮೃತ ಬೈಕ್ ಸವಾರ. ಚುರ್ಚಿಗುಂಡಿಯಿಂದ ಭದ್ರಾವತಿಗೆ ತೆರಳುವಾಗ ಅಪಘಾತ ಸಂಭವಿಸಿದೆ. ಶಿಕಾರಿಪುರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ನಡೆದಿದೆ.

ಮತ್ತೊಂದು ಪ್ರಕರಣದಲ್ಲಿ ಸೊರಬ ತಾಲೂಕಿನ ಕುಂಸಿ ಗ್ರಾಮದಲ್ಲಿ ಮತದಾನದ ಬಳಿಕ ಹೃದಯಘಾತದಿಂದ ವೃದ್ಧೆ ಮಲ್ಲಮ್ಮ (96) ಸಾವನ್ನಪ್ಪಿದ್ದಾರೆ.

ಪತಿ ಸಾವಿನ ನೋವಿನಲ್ಲೂ ಮತದಾನ ಮಾಡಿದ ಮಹಿಳೆ ಪತಿ ಸಾವಿನ ನೋವಿನಲ್ಲೂ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮಹಿಳೆ ಮತದಾನ ಮಾಡಿರುವಂತಹ ಘಟನೆ  ಜಿಲ್ಲೆಯ ಹೊಸನಗರ ತಾಲೂಕಿನ ಆಡುಗೋಡಿಯಲ್ಲಿ ನಡೆದಿದೆ. ವೆಂಕಟೇಶ್ ಅನಾರೋಗ್ಯದ ಕಾರಣ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಮತ ಹಾಕುವ ಮೊದಲು ಪತಿಯ ಸಾವಿನ ವಿಷಯ ತಿಳಿದ ಕಲಾವತಿ ಎಂಬುವವರು ಮತ ಹಾಕಿ ಬಳಿಕ ಪತಿಯ ಮೃತದೇಹ ನೋಡಲು ತೆರಳಿದ್ದಾರೆ.

ಕುಡಿದು ಬಂದ ಮತದಾರನಿಂದ ಮತಗಟ್ಟೆಯಲ್ಲಿ ಕಿರಿಕ್:
ಚಿಕ್ಕೋಡಿ: ಮತದಾರನೋರ್ವ ಮತಗಟ್ಟೆಗೆ ಮತಚಲಾಯಿಸಲು ಕುಡಿದು ಬಂದು ಆವಾಂತರ ಮಾಡಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದಲ್ಲಿ ನಡೆದಿದೆ.
154 ನಂಬರಿನ ಮತಗಟ್ಟೆಯಲ್ಲಿ ಮದ್ಯ ಪ್ರಿಯ ಇವಿಎಂ ಯಂತ್ರ ಸದ್ದು ಮಾಡಿಲ್ಲ ಎಂದು ಕಿರಿಕ್ ಮಾಡಿದ್ದಾನೆ. ಭದ್ರತಾ ಸಿಬ್ಬಂದಿ ಮತಗಟ್ಟೆಯಿಂದ ಹೊರಗೆ ಕಳಿಸುವಾಗ ಬಿದ್ದು ಗಾಯಗೊಂಡಿದ್ದಾನೆ.

ಮತದಾನದ ವಿಡಿಯೋ ವೈರಲ್ ಮಾಡಿದ ಮತದಾರ:
ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮತದಾರನೋರ್ವ ಮತದಾನ ಮಾಡಿದ ವಿಡಿಯೋ ವೈರಲ್ ಮಾಡಿರುವಂತಹ ಘಟನೆ ನಡೆದಿದೆ. ಮತದಾನದ ಗೌಪ್ಯತೆ ಕಾಪಾಡಿಕೊಳ್ಳದೆ ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ ಮಾಡಿ ವಿಡಿಯೋ ಹರಿ ಬಿಡಲಾಗಿದೆ. ಹೀಗಾಗಿ ವಿಡಿಯೋ ಬಗ್ಗೆ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.