ಡೈಲಿ ವಾರ್ತೆ: 10/ಮೇ /2024

ಕೊಡಗು: ಎಸ್ಎಸ್ಎಲ್ಸಿಯಲ್ಲಿ ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯ ತಲೆ ಕಡಿದು ಕೊಲೆ!

ಕೊಡಗು: ಗುರುವಾರ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಗ್ರಾಮಕ್ಕೆ ಕೀರ್ತಿ ತಂದಿದ್ದ ವಿದ್ಯಾರ್ಥಿನಿಯ ತಲೆ ಕಡಿದು ಭೀಕರವಾಗಿ ಕೊಲೆ ಮಾಡಿದ ಘಟನೆ ಕೊಡಗಿನ  ಸೋಮವಾರಪೇಟೆಯ ಸೂರ್ಲಬ್ಬಿ ಗ್ರಮಾದಲ್ಲಿ  ನಡೆದಿದೆ.

ಓಂಕಾರಾಪ್ಪ ಕೊಲೆ ಆರೋಪಿ. ಮೀನಾ ಮೃತ ವಿದ್ಯಾರ್ಥಿನಿ. ಮೀನಾ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಗುರುವಾರ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮೀನಾ ಉತ್ತಮ ಅಂಕ ಪಡೆದು ಪಾಸಾಗಿದ್ದಳು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾದ ಖುಷಿಯಲ್ಲಿ ಮೀನಾ ಮತ್ತು ಆಕೆಯ ಪೋಷಕರು ಇದ್ದರು. ಆದರೆ ಈ ಖುಷಿ ಹೆಚ್ಚು ಹೊತ್ತು ಇರಲಿಲ್ಲ.

ಸೂರ್ಯ ಮುಳುಗುತ್ತಿದ್ದ ಹಾಗೇ ವಿದ್ಯಾರ್ಥಿನಿಯ ಜೀವ ಕೂಡ ಅಂತ್ಯವಾಗಿದೆ. ಹೌದು ಆರೋಪಿ ಓಂಕಾರಪ್ಪ ಸಾಯಂಕಾಲ ಸಮಯದಲ್ಲಿ ಮೀನಾಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಮಚ್ಚಿನಿಂದ ವಿದ್ಯಾರ್ಥಿನಿಯ ತಲೆ ಕತ್ತರಿಸಿ ರುಂಡ-ಮುಂಡ ಬೇರ್ಪಡಿಸಿ ವಿಕೃತಿ ಮೆರೆದಿದ್ದಾನೆ.

ಓಂಕಾರಪ್ಪನೊಂದಿಗೆ ಮೀನಾಳ ನಿಶ್ಚಿತಾರ್ಥ ನಿನ್ನೆ ಫಿಕ್ಸ್ ಮಾಡಲಾಗಿತ್ತು. ಈ ವಿಚಾರ ತಿಳಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ನಿಶ್ಚಿತಾರ್ಥ ನಿಲ್ಲಿಸಿದ್ದಾರೆ. ಬಳಿಕ ಎರಡೂ ಕುಟುಂಬದವರು ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಆರೋಪಿ ಕೂಡ ಮನೆಗೆ ವಾಪಸ್ ಆಗಿದ್ದನಂತೆ. ಇದೇ ಸಿಟ್ಟಿನಲ್ಲಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

ಕೊಲೆ ನಡೆದ ಸ್ಥಳಕ್ಕೆ ಶ್ವಾನ ದಳ, ವಿಧಿ ವಿಜ್ಞಾನ ತಂಡ‌ ಭೇಟಿ ನೀಡಿದೆ. ಹಾಗೂ ಕೊಡಗು ಹೆಚ್ಚುವರಿ ಎಸ್ಪಿ ಸುಂದರ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಿಂದ‌ ಅನತಿ ದೂರದಲ್ಲಿ ಮಚ್ಚು ಪತ್ತೆಯಾಗಿದೆ. ಪೊಲೀಸರು ಆರೋಪಿಗಾಗಿ ತಿವ್ರ ಶೋಧ ನಡೆಸುತ್ತಿದ್ದಾರೆ.