ಡೈಲಿ ವಾರ್ತೆ: 10/ಜೂ./2024

ದಕ್ಷಿಣ ಕನ್ನಡ: ಬಿಜೆಪಿ ವಿಜಯೋತ್ಸವದ ಬಳಿಕ ದುಷ್ಕರ್ಮಿಗಳ ತಂಡದಿಂದ ಇಬ್ಬರಿಗೆ ಚಾಕು ಇರಿತ!

ಮಂಗಳೂರು: ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬೋಳಿಯಾರು ಎಂಬಲ್ಲಿ ನಡೆದಿದೆ.

ಚಾಕು ಇರಿತಕ್ಕೊಳಗಾದವರು ಬೋಳಿಯಾರು ನಿವಾಸಿಗಳಾದ ಸುರೇಶ್ ಮತ್ತು ನಂದಕುಮಾರ್ ಎಂದು ತಿಳಿದು ಬಂದಿದೆ.
ಭಾನುವಾರ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ವಿಜಯೋತ್ಸವ ಆಯೋಜಿಸಲಾಗಿತ್ತು.
ವಿಜಯೋತ್ಸವ ಮುಗಿಸಿ ಸುರೇಶ್ ಮತ್ತು ನಂದಕುಮಾರ್ ಅವರು ಬೋಳಿಯಾರು ಪೇಟೆಯಲ್ಲಿ ನಿಂತಿದ್ದರು. ಈ ವೇಳೆ ಅಪರಿಚಿತ ದುಷ್ಕರ್ಮಿಗಳ ತಂಡವು ಏಕಾಏಕಿ ಇಬ್ಬರಿಗೆ ಚಾಕುವಿನಿಂದ ಇರಿದಿದೆ. ಸದ್ಯ ಇಬ್ಬರಿಗೂ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಣ್ಣಪುಟ್ಟ ಗಾಯದೊಂದಿಗೆ ಇಬ್ಬರು ಪಾರಾಗಿದ್ದಾರೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.