ಡೈಲಿ ವಾರ್ತೆ: 11/ಜೂ./2024

ತುಂಬೆಯಲ್ಲಿ ಪ್ರಸಕ್ತ ವರ್ಷದ ಶೈಕ್ಷಣಿಕ ಮಾಹಿತಿ ಕಾರ್ಯಕ್ರಮ

ಬಂಟ್ವಾಳ ; ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿದ್ದು ಒಳ್ಳೆಯ ಅಂಕಗಳನ್ನು ಗಳಿಸಿ ಒಂದು ಶಿಕ್ಷಣ ಸಂಸ್ಥೆಯಿಂದ ಹೊರಗೆ ಹೋಗಬೇಕಾದರೆ, ಅವರ ಪಾಲಕರು ಶಿಕ್ಷಕರೊಂದಿಗೆ, ಶಿಕ್ಷಣ ಸಂಸ್ಥೆಯ ನಿಯಮಗಳೊಂದಿಗೆ ಹೊಂದಿಕೊಂಡು ಸಹಕಾರ ಕೊಟ್ಟಾಗ ಮಾತ್ರ ಸಾಧ್ಯವಾಗುತ್ತದೆ ಎಂದು  ತುಂಬೆಯ ಕನ್ನಡ ಉಪನ್ಯಾಸಕ ಅಬ್ದುಲ್ ರಹಿಮಾನ್ ಡಿ.ಬಿ. ಹೇಳಿದರು.

   ಅವರು ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ 2024 – 25 ರ ಶೈಕ್ಷಣಿಕ ಮಾಹಿತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

     ಎಂ.ಇ.ಟಿ. ಮ್ಯಾನೇಜರ್  ಅಬ್ದುಲ್ ಕಬೀರ್ ಮಾತನಾಡಿ,  ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗುಣಾತ್ಮಕವಾದ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಪರಿಸರದ ಮಂದಿಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ದಿ. ಬಿ.ಅಹಮ್ಮದ್ ಹಾಜಿಯವರು ಶೈಕ್ಷಣಿಕ  ಸಂಸ್ಥೆಯನ್ನು ಸ್ಥಾಪಿಸಿರುತ್ತಾರೆ. ಗ್ರಾಮೀಣ ಪ್ರದೇಶದ  ಅನೇಕ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯ ಪ್ರಯೋಜನ ಸಿಕ್ಕಿದೆ ಎಂದರು.

         ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ವಿ ಸುಬ್ರಹ್ಮಣ್ಯ ಭಟ್ ಮಾತನಾಡಿ ಶಿಸ್ತು ಹಾಗೂ ಶಿಕ್ಷಣ ಒಂದಕ್ಕೊಂದು ಪೂರಕ. ವಿದ್ಯಾರ್ಥಿ ಜೀವನದಲ್ಲಿ ಜೊತೆಯಾಗಿ ಅಳವಡಿಸಿಕೊಂಡಾಗ ಜೀವವದುದ್ದಕ್ಕೂ ಅದರ ಲಾಭ ಸಿಗುತ್ತದೆ ಎಂದರು.

        ಉಪನ್ಯಾಸಕರಾದ ಡಾ. ವಿಶ್ವನಾಥ ಪೂಜಾರಿ, ಪ್ರಪುಲ್ಲ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು .

    ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ ಸ್ವಾಗತಿಸಿ ಪ್ರಸ್ತಾವನೆ ಗೈದರು. ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ಜೆ.ನಾಯಕ್ ಕೆ. ವಂದಿಸಿದರು.
ಹಿರಿಯ ಉಪನ್ಯಾಸಕಿ ಕವಿತಾ ಕೆ. ಕಾರ್ಯಕ್ರಮ ನಿರೂಪಿಸಿದರು .