ಡೈಲಿ ವಾರ್ತೆ: 21/ಜೂ./2024

ಸಾಹಿತ್ಯ ವಿಭಜನೆಯಿಂದ ದೂರವಿರಲಿ : ಯು. ಎನ್. ಸಂಗನಾಳಮಠ

ಬೆಳಗಾವಿ: 21 ಜೂನ್ 2024 ರಂದು ತನ್ಮಯ ಚಿಂತನ ಚಾವಡಿಯಿಂದ ಕನ್ನಡ ಭವನದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿ ಪ್ರೊ. ಯು. ಎನ್. ಸಂಗನಾಳಮಠ ‘ಸತ್ಯಾನ್ವೇಷಣೆ’ ಕೃತಿಯ ರಚನೆ ಹಿಂದಿರುವ ಔಚಿತ್ಯವನ್ನು ವಿವರಿಸುತ್ತಾ ಸ.ರಾ. ಸುಳಕೂಡೆಯವರು ರಚಿಸಿರುವ ನವಸಾಕ್ಷರ ಕಾವ್ಯ, ಪ್ರಬಂಧ, ವೈಚಾರಿಕ ಸಾಹಿತ್ಯ, ಕಾನೂನು ಸಾಹಿತ್ಯ ಕೃತಿಗಳನ್ನು ಆಯ್ಕೆ ಮಾಡಿ ಈ ಕೃತಿಯನ್ನು ರಚಿಸಲಾಗಿದೆ ಎಂದರು. ಸಾಹಿತ್ಯ ಎಲ್ಲರನ್ನು ಒಗ್ಗೂಡಿಸಬೇಕು ವಿನಹ ವಿಭಜಿಸಬಾರದು. ಈ ಕೃತಿಯನ್ನು ಬಿಡುಗಡೆ ಮಾಡಿದ ನಿವೃತ್ತ ಪ್ರಾಚಾರ್ಯರು ಹಾಗೂ ಕವಿಗಳಾದ ವಿರೇಶ ಬಡಿಗೇರ ಸಾಹಿತ್ಯ ಎಲ್ಲರನ್ನು ಒಗ್ಗೂಡಿಸುವ ಜೊತೆಗೆ ವಿಚಾರಕ್ಕೂ ಮಹತ್ವ ನೀಡಬೇಕಿದೆ ಎಂದರು.

ಕೃತಿಯನ್ನು ಪರಿಚಯ ಮಾಡಿದ ಎಂ.ವೈ. ಮೆಣಸಿನಕಾಯಿಯವರು ಈ ಕೃತಿಯಲ್ಲಿ ವೈವಿಧ್ಯಮಯ ವಿಷಯಗಳು ಇವೆ, ಇವು ಅನುಭವಜನ್ಯವಾಗಿವೆ. ಸ.ರಾ. ಸುಳಕೂಡೆಯವರು ರಚಿಸಿರುವ 25 ಕೃತಿಗಳ ವಿಮರ್ಶೆ ಈ ಕೃತಿಯಲ್ಲಿ ವಿಹಂಗಮವಾಗಿ ಮೂಡಿಬಂದಿದೆ. ಈ ಕೃತಿಯನ್ನು ಓದಿದರೆ ಕಾನೂನು ಮತ್ತಿತರ ವಿಷಯಗಳ ಸಂಕ್ಷಿಪ್ತ ಪರಿಚಯವಾಗುತ್ತದೆ. ಇದು ಓದುಗರಿಗೆ ಒಂದು ಮಾರ್ಗಸೂಚಿ ಕೃತಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಇತಿಹಾಸ ಕಾದಂಬರಿಕಾರ ಯ.ರು. ಪಾಟೀಲಯವರು ಪ್ರೊ ಸಂಗನಾಳಮಠ ಅವರು 25 ಕೃತಿಗಳನ್ನು ಅವಲೋಕಿಸಿ ಕೃತಿಯನ್ನು ರಚಿಸಿದ್ದು ಮೆಚ್ಚುವ ಸಂಗತಿಯಾಗಿದೆ. ಓದುವ ಸಂಸ್ಕೃತಿಯನ್ನು ನಾವೆಲ್ಲರೂ ಬೆಳೆಸಬೇಕಾಗಿದೆ ಎಂದರು. ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಅವರು ಬೆಳಗಾವಿ ಪರಿಸರದಲ್ಲಿ ಯುವ ಸಾಹಿತಿಗಳನ್ನು ಬೆಳೆಸುವ ಮತ್ತು ಯೋಗ್ಯರಿಗೆ ಪ್ರಶಸ್ತಿಗಳು ಸಿಗುವಂತಾಗಲಿ ಎಂದು ಹರಿಸಿದರು.

ನಿವೃತ್ತ ಉಪನ್ಯಾಸಕರು ಬಾಳಗೌಡ ದೊಡಬಂಗಿ ಅವರು ಕೃತಿಯ ಔಚಿತ್ಯದ ಕುರಿತು ಮಾತನಾಡಿದರು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಹಿರಿಯ ಕವಿ ಬಿ.ಕೆ. ಮಲಾಬಾದಿ ಅವರು ತಮ್ಮ ಸಾಹಿತ್ಯ ನಡೆದ ಬಂದ ದಾರಿಯನ್ನು ವಿವರಿಸಿದರು ಮತ್ತು ಉದ್ಯೋನ್ಮುಖ ಸಾಹಿತಿಗಳಿಗೆ ಪ್ರೋತ್ಸಾಹ ಅವಶ್ಯಕತೆ ಇದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನು ಸ.ರಾ. ಸುಳಕೂಡೆ ಆಡಿದರು. ತನ್ಮಯ ಚಿಂತನ ಚಾವಡಿ ಸಂಚಾಲಕರಾದ ಅಶೋಕ ಉಳ್ಳೇಗಡ್ಡಿ ಅವರು ಸ್ವಾಗತಿಸಿ, ಈ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದರು. ಈ ಸಮಾರಂಭದಲ್ಲಿ ಹೇಮಾವತಿ ಸುನ್ನೋಳಿ, ಬಿ. ವೈ. ನಾಯಿಕ, ವೀರಭದ್ರ ಅಂಗಡಿ, ಗುರುಸಿದ್ದಯ್ಯ ಹಿರೇಮಠ, ಈರಪ್ಪ ಪಾಟೀಲ, ಎಸ್. ಐ. ವಾಲಿಕರ, ಎಂ.ಬಿ. ಕೋಳಿವಾಡ, ಸುನೀಲ ಪರೀಟ, ಸುಮನ ಪರೀಟ, ಉಪಸ್ಥಿತರಿದ್ದರು. ಪ್ರೊ. ಬಿ.ಬಿ. ಮಠಪತಿ ನಿರೂಪಿಸಿ ವಂದಿಸಿದರು.