ಡೈಲಿ ವಾರ್ತೆ: 29/ಜೂ./2024

ಕೊಲ್ಲೂರು: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಮೃತ್ಯು – ರಕ್ಷಣೆಗೆ ಹೋದ ತಾಯಿಯ ಸ್ಥಿತಿ ಗಂಭೀರ

ಕೊಲ್ಲೂರು: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಬೆಳ್ಳಾಲ ಗ್ರಾಮದ ನಂದ್ರೊಳಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಮೃತ ದುರ್ದೈವಿ ಮಕ್ಕಳು ಚಿಕ್ಕನಕಟ್ಟು ನಿವಾಸಿ ಗಳಾದ ಧನ್ ರಾಜ್(13), ಛಾಯಾ (7) ಎಂದು ಗುರುತಿಸಲಾಗಿದೆ.
ಮಕ್ಕಳನ್ನು ರಕ್ಷಿಸಲು ಹೋಗಿದ್ದ ತಾಯಿ ಶೀಲಾ ಮಡಿವಾಳ (40) ಇವರು ನೀರಲ್ಲಿ ಮುಳುಗಿ ಹೋಗಿದ್ದು ಆಕೆಯನ್ನು ರಕ್ಷಣೆ ಮಾಡಲಾಗಿದೆ. ಆದರೆ ಆಕೆಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರು ಮಕ್ಕಳು ವಂಡ್ಸೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದರು. ಶೀಲಾ ಅವರ ಪತಿ ಸತೀಶ್ ಮಡಿವಾಳ ವಿಜಯಪುರದಲ್ಲಿ ಹೋಟೆಲ್ ಕಾರ್ಮಿಕರಾಗಿದ್ದಾರೆ.

ಮನೆ ಹತ್ತಿರದಲ್ಲೇ ಇದ್ದ ಕೆರೆಯಲ್ಲಿ ಛಾಯಾ ಕಾಲು ಜಾರಿ ಬಿದ್ದಾಗ ರಕ್ಷಿಸಲು ಧನ್ ರಾಜ್ ಹೋಗಿದ್ದು ಇಬ್ಬರೂ ನೀರಲ್ಲಿ ಮುಳುಗಿದ್ದಾರೆ. ಆ ಬಳಿಕ ತಾಯಿ ಮಕ್ಕಳ ರಕ್ಷಣೆಗೆಂದು ಹೋಗಿ ನೀರಿನಲ್ಲಿ ಮುಳುಗುತ್ತಿರುವುದನ್ನು ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಕೃಷಿ ಇಲಾಖೆಯ ಅಧಿಕಾರಿಗಳು ಕಂಡು ಸ್ಥಳೀಯರನ್ನು ಕರೆದು ಶೀಲಾ ಅವರನ್ನು ರಕ್ಷಿಸಿದ್ದಾರೆ. ಮಕ್ಕಳಿಬ್ಬರು ಅದಾಗಲೇ ಪ್ರಾಣ ಕಳೆದುಕೊಂಡಿದ್ದರು.
ಶೀಲಾ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.