ಡೈಲಿ ವಾರ್ತೆ: 29/ಜೂ./2024

ಕಾರ್ಕಳ: ನಾಯಿ ಅಡ್ಡ ಬಂದು ಬೈಕ್ ಪಲ್ಟಿ – ಸಹಸವಾರೆ ಮೃತ್ಯು!

ಕಾರ್ಕಳ:ನಾಯಿ ಅಡ್ಡ ಬಂದು ಬೈಕ್ ಪಲ್ಟಿ ಹೊಡೆದು ನವವಿವಾಹಿತೆಯೊಬ್ಬಳು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರು ಸೇತುವೆ ಬಳಿ ಶುಕ್ರವಾರ ಸಂಭವಿಸಿದೆ.

ಮೃತ ದುರ್ದೈವಿ ಕಾರ್ಕಳ ಈದು ಗ್ರಾಮದ ತೆಳ್ಳಾರು ರಸ್ತೆಯ ನಿವಾಸಿ ನೀಕ್ಷಾ (26) ಎಂದು ಗುರುತಿಸಲಾಗಿದೆ.

ನೀಕ್ಷಾರವರು ಕಳೆದ ಎರಡು ತಿಂಗಳ ಹಿಂದೆಯಷ್ಟೇ ವಿಶಾಲ್ ಎಂಬವರೊಂದಿಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದರು.
ಶುಕ್ರವಾರ ಮಧ್ಯಾಹ್ನದ ವೇಳೆಗೆ ಇವರು ಮಂಗಳೂರಿಗೆ ಹೊರಟಿದ್ದು, ಹೊಸ್ಮಾರು, ಶಿರ್ತಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುವ ಖಾಸಗಿ ಬಸ್ಸು ಏರಲೆಂದು ಪತಿಯೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದರು. ಆ ವೇಳೆಗೆ ಈದು ಕ್ರಾಸ್ ಬಳಿಯಲ್ಲಿ ಬಸ್ಸು ಹೊರಟು ಹೋದುದರಿಂದ ಹೊಸ್ಮಾರು ಜಂಕ್ಷನ್‌ನಲ್ಲಿ ಬಸ್ಸು ಏರವ ಸಲುವಾಗಿ ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಹೊಸ್ಮಾರು ಸೇತುವೆ ಸಮೀಪ ಸ್ಮಶಾನ ಬಳಿ ರಸ್ತೆಗೆ ನಾಯಿಯೊಂದು ಅಡ್ಡ ಬಂದಿದ್ದರಿಂದ ವೇಗವಾಗಿ ಬರುತ್ತಿದ್ದ ಬೈಕ್ ನಾಯಿಗೆ ಡಿಕ್ಕಿ ಹೊಡೆದು ಪಲ್ಟಿ ಆಗಿದೆ.
ಆ ವೇಳೆಗೆ ಬೈಕ್‌ನ ಸಹಸವಾರಿ ನಿಕ್ಷಾ ರಸ್ತೆಗೆ ಎಸೆಯಲ್ಪಟ್ಟು ತಲೆ ಭಾಗಕ್ಕೆ ತೀವ್ರ ತರದಲ್ಲಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.