ಡೈಲಿ ವಾರ್ತೆ: 08/ಜುಲೈ /2024

ಇಂದು ಸಂಜೆ ಉಳ್ಳಾಲ ದರ್ಗಾದಲ್ಲಿ ಕೂರತ್ ತಂಙಳ್ ಅಂತಿಮ ದರ್ಶನಕ್ಕೆ ವ್ಯವಸ್ಥೆ: ರಸ್ತೆ ಸಂಚಾರದಲ್ಲಿ ಬದಲಾವಣೆ ಕುರಿತು ಎಸಿಪಿ ಜೊತೆ ಸಭೆ.

ಉಳ್ಳಾಲ: ಇಂದು ನಿಧನರಾದ ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಅವರ ಪಾರ್ಥಿವ ಶರೀರ ಇಂದು ಸಂಜೆ 7 ಗಂಟೆ ಸುಮಾರಿಗೆ ಉಳ್ಳಾಲ ದರ್ಗಾ ವಠಾರಕ್ಕೆ ತಲುಪುವ ಸಾಧ್ಯತೆ ಇದೆ.

ಅಂತಿಮ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇರುವುದರಿಂದ ಸೂಕ್ತ ಬಂದೋಬಸ್ತ್ ಗಾಗಿ ಎಸಿಪಿ ಧನ್ಯಾ ನೇತೃತ್ವದಲ್ಲಿ ದರ್ಗಾ ಕಚೇರಿಯಲ್ಲಿ ಸಭೆ ನಡೆಸಲಾಗಿದೆ.

ಜನ ನಿಭಿಡತೆ ನಿಯಂತ್ರಿಸಲು ದರ್ಗಾಕ್ಕೆ ಆಗಮಿಸುವ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಉಳ್ಳಾಲ ದರ್ಗಾಕ್ಕೆ ಆಗಮಿಸುವವರು ಓವರ್ ಬ್ರಿಡ್ಜ್ ಮೂಲಕ ಮಾಸ್ತಿಕಟ್ಟೆಯವರೆಗೆ ಮಾತ್ರ ವಾಹನದಲ್ಲಿ ಬರಲು ಅವಕಾಶ ಕಲ್ಪಿಸಲಾಗಿದೆ. ಬಳಿಕ ಮಾಸ್ತಿಕಟ್ಟೆಯಿಂದ ಕಾಲ್ನಡಿಗೆಯಲ್ಲಿ ದರ್ಗಾ ತಲುಪಬಹುದು. ದರ್ಗಾಕ್ಕೆ ಆಗಮಿಸಿ ಹಿಂದಿರುಗುವವರು ಸೋಮೇಶ್ವರ ಮಾರ್ಗವಾಗಿ ತೆರಳಬೇಕು ಎಂದು ಎಸಿಪಿ ತಿಳಿಸಿದರು. ವಾಹನ ಪಾರ್ಕಿಂಗ್ ಗೆ ಉಳ್ಳಾಲ ಬೈಲು, ಹಝ್ರತ್ ಶಾಲೆ, ಉಳ್ಳಾಲ ಬೀಚ್, ಮಾಸ್ತಿಕಟ್ಟೆ, ಅಬ್ಬಕ್ಕ ಸರ್ಕಲ್, ಭಗವತಿ ದೇವಸ್ಥಾನ ಬಳಿ ವ್ಯವಸ್ಥೆ ಮಾಡಲಾಗಿದೆ ಎಂದವರು ವಿವರಿಸಿದರು. ಸಭೆಯಲ್ಲಿ ಉಳ್ಳಾಲ ಠಾಣಾ ಇನ್ ಸ್ಪೆಕ್ಟರ್ ಬಾಲಕೃಷ್ಣ, ಉಳ್ಳಾಲ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ಸಮಿತಿಯ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.