ಡೈಲಿ ವಾರ್ತೆ: 09/ಜುಲೈ /2024

ಕುಂದಾಪುರದಲ್ಲಿ ಜುಲೈ 12 ರಿಂದ 14ರ ವರೆಗೆ ಹಲಸು ಮತ್ತು ಕೃಷಿ ಮೇಳ

ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ವತಿಯಿಂದ ಹಲಸು ಮತ್ತು ಕೃಷಿ ಮೇಳ ಜುಲೈ 12 ರಿಂದ 14ರವರೆಗೆ ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಅಧ್ಯಕ್ಷ ಜನನಿ ದಿವಾಕರ್ ಶೆಟ್ಟಿ ಹೇಳಿದರು.
ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕುಂದಾಪುರ ಪರಿಸರ ಜನರಿಗೆ ಹಾಗೂ ಕೃಷಿಕರಿಗೆ ಉಪಯೋಗವಾಗುವ ದೃಷ್ಟಿಯಿಂದ ಹಾಗೂ ಸಣ್ಣ ಸಣ್ಣ ಕೃಷಿ ಮತ್ತು ಗೃಹ ಕೈಗಾರಿಕೆ ಉತ್ಪನ್ನ ತಯಾರಿಸುವ ಮತ್ತು ಮಾರಾಟ ಮಾಡುವವರಿಗೆ ಒಂದೇ ಸೂರಿನಡಿ ಕೃಷಿ ಉತ್ಪನ್ನ ಹಾಗೂ ಹಲಸಿನ ಮತ್ತು ಮಾವಿನ ವಿಶೇಷ ಆಹಾರ ಹಾಗೂ ಕೃಷಿ ಯಂತ್ರೋಪಕರಣ ಮತ್ತು ಸಾವಯವ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಸ್ಥಾಪಕ ಅಧ್ಯಕ್ಷ ಕಿರಣ್ ಕುಂದಾಪುರ ಕೃಷಿ ಮೇಳದ ವಿಶೇಷ ಕುರಿತು ಮಾಹಿತಿ ನೀಡಿ ತೋಟಗಾರಿಕೆ, ಇಲಾಖೆ ಅರಣ್ಯ ಇಲಾಖೆ, ಕೃಷಿ ಇಲಾಖೆ ಹಲೋ ಗೆಳೆಯರು ನಂದಿಬೆಟ್ಟು ಇವರ ಸಹಯೋಗದೊಂದಿಗೆ ಕುಂದಾಪುರ ನಗರದಲ್ಲಿ ನೆಹರು ಮೈದಾನದಲ್ಲಿ ಪ್ರಥಮ ಬಾರಿಗೆ ಹಲಸು ಹಾಗೂ ಕೃಷಿ ಮೇಳ ಆಯೋಜಿಸಲಾಗಿದೆ.

ಜುಲೈ 12 ರಿಂದ ಜುಲೈ 14ರ ರವಿವಾರ ತನಕ ಬೆಳಿಗ್ಗೆ 9 ರಿಂದ ರಾತ್ರಿ 8ರ ತನಕ ಹಲಸು ಮೇಳ, ಕೃಷಿ ಮೇಳ ಆಯೋಜಿಸಲಾಗಿದೆ. ಹಲಸಿನ ವಿವಿಧ ತಾಜಾ ತಿಂಡಿಗಳು ಹಲಸಿನ ಹಾಗೂ ವಿವಿಧ ಜಾತಿಯ ಹಣ್ಣಿನ ಗಿಡಗಳು, ಹೂವಿನ ಗಿಡಗಳು, ತರಕಾರಿ ಬೀಜಗಳು, ಸಾವಯವ ಗೊಬ್ಬರ ಸಾವಯವ ಉತ್ಪನ್ನಗಳು ಇರಲಿವೆ ಎಂದರು.

ಲಯನ್ಸ್ ಕಾರ್ಯದರ್ಶಿ ಶ್ರೀಧರ್ ಮರುವಂತೆ ಮಾತನಾಡಿ ಅತ್ಯಾಧುನಿಕ ಯಂತ್ರೋಪಕರಣ ಮತ್ತು ಕೃಷಿ ಸಲಕರಣೆ ಎಲ್ಲಾ ಬಗೆಯ ಹಣ್ಣಿನ ಹಾಗೂ ಹೂವಿನ ಗಿಡಗಳು ಮತ್ತು ಅಡಿಕೆ ಗಿಡಗಳು, ಖಾದಿ ಮತ್ತು ಕೈಮಗ್ಗದ ಬಟ್ಟೆಗಳು, ಆಯುರ್ವೇದ ಉತ್ಪನ್ನಗಳು ದೊರೆಯಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಸಂಸದರು ಶಾಸಕರು ಸಹಾಯಕ ಕಮಿಷನರ್ ಭಾಗವಹಿಸಲಿದ್ದಾರೆ.