ಡೈಲಿ ವಾರ್ತೆ: 11/ಜುಲೈ /2024

ಕುಂದಾಪುರ: ಬೈಕ್ ಗೆ ಖಾಸಗಿ ಬಸ್ ಡಿಕ್ಕಿ – ಪೌರಕಾರ್ಮಿಕ ಸ್ಥಳದಲ್ಲೇ ಸಾವು

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಹಂಗಳೂರು ದುರ್ಗಾಂಬ ಬಸ್ ಡಿಪ್ಪೋ ಬಳಿ ಬೈಕ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಪೌರ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಜು. 11 ರಂದು ಗುರುವಾರ ರಾತ್ರಿ ನಡೆದಿದೆ.

ಮೃತಪಟ್ಟ ಬೈಕ್ ಸವಾರ ಕುಂದಾಪುರ ಪುರಸಭೆಯ ಪೌರ ಕಾರ್ಮಿಕ ಸುಂದರ (39) ಎಂದು ಗುರುತಿಸಲಾಗಿದೆ.

ಕೋಟೇಶ್ವರದಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಬೈಕ್ ಗೆ ಕುಂದಾಪುರದಿಂದ ಹಂಗಳೂರು ದುರ್ಗಾಂಬ ಡಿಪ್ಪೋ ಒಳಗೆ ಹೋಗುತ್ತಿದ್ದ ಬಸ್ ನ್ನು ಚಾಲಕ ಹಠಾತ್ತಾಗಿ ಹೆದ್ದಾರಿಯಲ್ಲಿ ನಿರ್ಲಕ್ಷತನದಿಂದ ತಿರುಗಿಸಿದಾಗ ನೇರ ಬೈಕ್ ಗೆ ಡಿಕ್ಕಿ ಹೊಡೆದಿದ್ದು. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕುಂದಾಪುರ ಪುರಸಭೆ ಪೌರ ಕಾರ್ಮಿಕ ಮೂಲತ ಬಾರ್ಕೂರು ಬಂಡಿ ಮಠದವರಾಗಿದ್ದು ಕುಂದಾಪುರದ ಮನೆಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಕುಂದಾಪುರ ಸಂಚಾರಿ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕಾಗಿಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.