ಡೈಲಿ ವಾರ್ತೆ: 13/ಜುಲೈ /2024

ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ: ಮೂಡಾ ಹಗರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು – ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಒತ್ತಾಯ

ಉಡುಪಿ: ಸಿಎಂ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಆಗ್ರಹ ಮಾಡಿದ್ದಾರೆ.
ಮೈಸೂರು ಮೂಡಾ ಸೈಟ್ ಗೋಲ್ ಮಾಲ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನಿಮ್ಮ ಮೂಗಿನ ಅಡಿಯೇ ಬೃಹತ್ ಹಗರಣ ನಡೆದಿದೆ. ರಾಜ್ಯ ಕಾಂಗ್ರೆಸ್ ನ ಮುಖ್ಯಸ್ಥರಾದ ನೀವು ಅಧಿಕಾರರಿಂದ ಕೆಳಗಿಳಿಯಿರಿ ಎಂದು ಒತ್ತಾಯಿಸಿದರು.


ತೊಡೆ ತಟ್ಟಿ ಹೆಗಲು ತಟ್ಟಿ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೀರಿ, ಬಿಜೆಪಿ ಮೇಲೆ 40% ಆರೋಪ ಮಾಡಿದ ನೀವು ಈಗ ಅಧಿಕಾರದಿಂದ ಇಳಿಯುವುದು ಸೂಕ್ತ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ 14 ಸಾವಿರ ಕೋಟಿ ಹಣ ಭಾಗ್ಯಗಳಿಗೆ ಬಳಕೆಯಾಗುತ್ತಿದೆ. ರಾಜ್ಯದಲ್ಲಿರೋದು ದಲಿತ ವಿರೋಧಿ ಸರಕಾರ. ದಲಿತರ ಮೇಲಿನ ಅನ್ಯಾಯ ಸರಿಪಡಿಸಿ ತಕ್ಷಣ ಇಲಾಖೆಗೆ ಹಣ ವರ್ಗಾಯಿಸಿ. ವಾಲ್ಮೀಕಿ ಪಂಗಡಕ್ಕೆ ಕಾಂಗ್ರೆಸ್ ಸರಕಾರ ಮೋಸ ಮಾಡಿದೆ. ಮೂಡಾ ಮತ್ತು ವಾಲ್ಮಿಕಿ ಹಗರಣ ಸಿಬಿಐ ತನಿಖೆಗೆ ಒಪ್ಪಿಸಬೇಕು. ಸಿಎಂ ಒಂದು ಕ್ಷಣ ಕೂಡಾ ಅಧಿಕಾರದಲ್ಲಿ ಕೂರಲು ಲಾಯಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ನಾಯಕರ ಬಂಧನ ವಿಚಾರದ ಬಗ್ಗೆ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಸಂದರ್ಭ ವಾಕ್ ಸ್ವಾತಂತ್ರ್ಯ ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿತ್ತು. ತಾವು ಮಾಡಿದ ತಪ್ಪಿಗೆ ವಿಪಕ್ಷದವರನ್ನು ಬಂಧಿಸಿದ್ದಾರೆ. ಘಟನೆ ತುರ್ತು ಪರಿಸ್ಥಿತಿಯ ಕರಾಳತೆ ನೆನಪಿಗೆ ತರುತ್ತದೆ. ಸಚಿವ ನಾಗೇಂದ್ರರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ರಾಜ್ಯ ಸರ್ಕಾರ ಪಾರದರ್ಶಕ ವಾಗಿದ್ದರೆ ತನಿಖೆ, ಕ್ರಮ ಮೊದಲೇ ಆಗಬೇಕಿತ್ತು. ಎಸ್ ಐಟಿ, ಇಡಿ ನೆಪ ಮಾತ್ರ ಸಿದ್ದರಾಮಯ್ಯಗೆ ಮೂಡಾ, ವಾಲ್ಮಿಕಿ ಹಗರಣ ತನಿಖೆಯೇ ಆಗುವುದೇ ಇಷ್ಟ ಇಲ್ಲ. ಇಡಿ ತನಿಖೆಯ ಒಂದು ಭಾಗ, ಪ್ರಕರಣವನ್ನು ಸಿಬಿಐ ತನಿಖೆ ಮಾಡಬೇಕು ಎಂದರು.