ಡೈಲಿ ವಾರ್ತೆ: 13/ಜುಲೈ /2024

ಬೈಕ್‌ ಕೊಡಿಸದಿದ್ದಕ್ಕೆ ಪುತ್ರ ಆತ್ಮಹತ್ಯೆ: ಮಗನ ಸಾವಿನ ಸುದ್ದಿ ಕೇಳಿ ರೈಲಿಗೆ ತಲೆ ಕೊಟ್ಟ ತಾಯಿ!

ರಾಣಿಬೆನ್ನೂರು: ಮನೆಯಲ್ಲಿ ಬೈಕ್ ಕೊಡಿಸದಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿನ ಸುದ್ದಿ ತಿಳಿದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜು. 13 ರಂದು ಶನಿವಾರ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕರೂರು ಗ್ರಾಮದಲ್ಲಿ ನಡೆದಿದೆ.

ಧನರಾಜ್ ನಾಯಕ (18) ಹಾಗೂ ಈತನ ತಾಯಿ ಭಾಗ್ಯಮ್ಮ ನಾಯಕ (43) ಆತ್ಮಹತ್ಯೆ ಮಾಡಿಕೊಂಡವರು. ಎರಡು ವರ್ಷದ ಹಿಂದೆ ಭಾಗ್ಯಮ್ಮ ಅವರ 14 ವರ್ಷದ ಇನ್ನೋರ್ವ ಪುತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಇದೀಗ ಭಾಗ್ಯಮ್ಮನ ಪತಿ ಸುರೇಶ್ ನಾಯಕ ಪತ್ನಿ, ಪುತ್ರನನ್ನು ಕಳೆದುಕೊಂಡು ದುಖಃದ ಮಡುವಿನಲ್ಲಿ ಮುಳುಗುವಂತಾಗಿದೆ.

ಹರಿಹರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಧನರಾಜ್ ನನಗೆ ಬೈಕ್ ತೆಗೆದುಕೊಳ್ಳಲು ಹಣ ಬೇಕೆಂದು ತಂದೆ- ತಾಯಿ ಬಳಿ ಬೆಳಗ್ಗೆ ಜಗಳ ತೆಗೆದಿದ್ದ. ಕೂಲಿ ಮಾಡಿಕೊಂಡಿರುವ ತಂದೆ ಸುರೇಶ ಆಯ್ತು ಹೇಗಾದರೂ ಮಾಡಿ ಕೊಡಿಸುತ್ತೇನೆ ಎಂದು ಕೆಲಸಕ್ಕೆ ಹೋಗಿದ್ದರು. ನಂತರ ತಾಯಿ ಮಗನಿಗೆ ಬುದ್ದಿಮಾತು ಹೇಳಿದ್ದರು.
ತಾಯಿ ಪಕ್ಕದ ಮನೆಗೆ ಹೋಗಿದ್ದ ವೇಳೆ ಮಧ್ಯಾಹ್ನ ಧನರಾಜ್ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿ ಮನೆಗೆ ಬರುತ್ತಿದ್ದಂತೆ ಮಗನ ಸ್ಥಿತಿ ಕಂಡು ದಿಗ್ಬ್ರಾಂತರಾಗಿದ್ದಾರೆ. ಇದರಿಂದ ದುಃಖಿತರಾಗಿ ಕರೂರ ರೈಲು ನಿಲ್ದಾಣದ ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಕುಮಾರಪಟ್ಟಣ ಪಿಎಸ್‌ಐ ಪ್ರವೀಣ ವಾಲೀಕಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.