ಡೈಲಿ ವಾರ್ತೆ: 19/ಜುಲೈ /2024

ಲೋಕಾಯುಕ್ತ ದಾಳಿ ವೇಳೆ ಚಿನ್ನ ಇದ್ದ ಬ್ಯಾಗನ್ನು ಪಕ್ಕದ ಮನೆಗೆ ಎಸೆದ ಅಧಿಕಾರಿ

ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಬಿಸಿ ಮುಟ್ಟಿಸಿದೆ. ತಮ್ಮ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆಗೆ ಬರುತ್ತಿದ್ದಂತೆ ಅಧಿಕಾರಿಯೊಬ್ಬರು ಚಿನ್ನ ಮತ್ತು ಹಣ ಇದ್ದ ಬ್ಯಾಗ್‌ನ್ನು ಕಿಟಕಿಯಿಂದ ಪಕ್ಕದ ಮನೆಗೆ ಎಸೆದ ಪ್ರಸಂಗ ನಡೆದಿದೆ.

ಕಾನೂನು ಮಾಪನ ಇಲಾಖೆ ಡೆಪ್ಯುಟಿ ಕಂಟ್ರೋಲರ್ ಅತ್ಹರ್ ಆಲಿ ಎಂಬವರ ನಿವಾಸ ಮತ್ತು ಕಚೇರಿ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಮುಂಜಾನೆ 5:30 ರ ಹೊತ್ತಿಗೆ ಕಲ್ಯಾಣ ನಗರದಲ್ಲಿರುವ ನಿವಾಸಕ್ಕೆ ತೆರಳಿದ ಲೋಕಾಯುಕ್ತ ಅಧಿಕಾರಿಗಳು ಸುಮಾರು 5 ಗಂಟೆಗಳಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಅತ್ಹರ್ ಆಲಿ ಮನೆಯಲ್ಲಿ ಹಣ, ಚಿನ್ನ ಪತ್ತೆಯಾಗಿದೆ. ಅಧಿಕಾರಿಗಳು ಮನೆಗೆ ಎಂಟ್ರಿ ನೀಡುತ್ತಿದ್ದಂತೆ ಅತ್ಹರ್ ಆಲಿ ಅವರು ಪಕ್ಕದ ಮನೆಯ ಕಿಟಕಿಯೊಳಗೆ ಚಿನ್ನ ಇದ್ದ ಬ್ಯಾಗ್ ಎಸೆದಿದ್ದರು. ಪಕ್ಕದ ಮನೆಯ ಕಿಟಕಿಗೆ ಹತ್ತಿರದಲ್ಲೇ ಇವರ ಮೊದಲ ಅಂತಸ್ತು ಇತ್ತು. ಅಲ್ಲಿಂದ ಪಕ್ಕದ ಮನೆ ಕಿಟಕಿ ಒಳಗೆ ಬ್ಯಾಗ್‌ಗೆ ತುಂಬಿ ಚಿನ್ನ ಎಸೆದಿದ್ದರು. ಬ್ಯಾಗ್ ಎಸೆದಿದ್ದನ್ನ ನೋಡಿ ನೆರೆಮನೆ ನಿವಾಸಿ ಖುದ್ದು ಅಧಿಕಾರಿಗಳನ್ನ ಕರೆದಿದ್ದಾರೆ. ಕೂಡಲೇ ಹೋಗಿ ಪರಿಶೀಲನೆ ಮಾಡಿದಾಗ ಬ್ಯಾಗ್‌ನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ನಂತರ ಅಧಿಕಾರಿಗಳು ಬ್ಯಾಗ್ ವಶಕ್ಕೆ ಪಡೆದಿದ್ದಾರೆ.

ಒಂದು ಬ್ಯಾಗ್ ತುಂಬಾ ಚಿನ್ನದ ವಸ್ತುಗಳು ಸಿಕ್ಕಿವೆ. ಸದ್ಯ ನೆರಮನೆಯಲ್ಲಿ ಅಧಿಕಾರಿಗಳ ತಂಡ ತಲಾಶ್ ಮುಂದುವರಿಸಿದೆ.