ಡೈಲಿ ವಾರ್ತೆ: 20/ಜುಲೈ /2024

ವಿಧಾನಸೌಧದ ಗುಮ್ಮಟದಲ್ಲಿ ಬಿರುಕು – ಸಿಎಂ ಗಮನಕ್ಕೆ ತರ್ತೀನಿ ಎಂದ ಸ್ಪೀಕರ್‌

ಬೆಂಗಳೂರು: ವಿಧಾನಸೌಧದ ಪೂರ್ವ ಭಾಗದ ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮಾಹಿತಿ ಪಡೆದ ಸ್ಪೀಕರ್ ಯುಟಿ ಖಾದರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸಿಎಂ ಗಮನಕ್ಕೆ ತರುವುದಾಗಿಯೂ ಹೇಳಿದ್ದಾರೆ.

ಗುಮ್ಮಟದಲ್ಲಿ ಸಣ್ಣ ಮಟ್ಟದ ಬಿರುಕು ಕಾಣಿಸಿದ್ದು. ಜೋರು ಮಳೆ ಬಂದಾಗ ನೀರು ಸಹ ಲೀಕೇಜ್ ಆಗುತ್ತಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಖುದ್ದು ಸ್ಪೀಕರ್ ಯು.ಟಿ ಖಾದರ್ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸೌಧ ರಾಜಕೀಯ ನಾಯಕರ ಕಟ್ಟಡವಾಗಿರದೇ ಪ್ರವಾಸಿಗರ ಆಕರ್ಷಣೆಯ ಕೇಂದ್ರವೂ ಆಗಿದೆ. ಆದ್ರೆ ದೊಡ್ಡ ಕಟ್ಟಡಗಳನ್ನು ಸರಿಪಡಿಸುವಾಗ ಮತ್ತೊಂದು ಕಡೆ ಸ್ವಲ್ಪ ಹೆಚ್ಚು-ಕಡಿಮೆ ಆಗಬಹುದು. ಗುಮ್ಮಟ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಫ್ಲೋರ್‌ಗಳು ಮಾತ್ರ ವ್ಯಾಪ್ತಿಗೆ ಬರುತ್ತದೆ. ಆದರೂ ಈ ವಿಚಾರವನ್ನ ಸಿಎಂ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.

ನಮ್ಮ ವ್ಯಾಪ್ತಿಯಲ್ಲಿನ ಫ್ಲೋರ್‌ಗಳನ್ನು ಸರಿಪಡಿಸಿದ್ದೇನೆ. ಡಿಪಿಆರ್ ಹಾಗೂ ಲೋಕೋಪಯೋಗಿ ಇಲಾಖೆಯವರ ವ್ಯಾಪ್ತಿಗೆ ಗುಮ್ಮಟ ಬರುತ್ತದೆ. ಅವರ ಗಮನಕ್ಕೆ ತಂದು ಸರಿಪಡಿಸಲು ಹೇಳುತ್ತೇನೆ. ಇದು ಬಹಳ ವರ್ಷಗಳ ಹಳೆಯ ಕಟ್ಟಡ. ಕೆಲವೊಂದು ಲೋಪದೋಷ ಆಗಿರಬಹುದು, ಆದಷ್ಟು ಬೇಗ ಸಿಎಂಗೆ ವಿಚಾರ ತಿಳಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.