ಡೈಲಿ ವಾರ್ತೆ: 22/ಜುಲೈ /2024

ಸರ್ಕಾರಿ ನೌಕರರು ಆರ್‌ಎಸ್‌ಎಸ್ ಸೇರಬಹುದು – ನಿಷೇದ ವಾಪಸ್ ಪಡೆದ ಕೇಂದ್ರ ಸರ್ಕಾರ!

ನವದೆಹಲಿ: ಸರ್ಕಾರಿ ನೌಕರರು ಆರ್‌ಎಸ್‌ಎಸ್‌ನಲ್ಲಿ (RSS) ತೊಡಗಿಕೊಳ್ಳುವುದಕ್ಕೆ ದಶಕಗಳ ಹಿಂದೆ ಜಾರಿಗೊಳಿಸಲಾಗಿದ್ದ ನಿಷೇಧವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ.

ಜು.9 ರಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ನಿಷೇಧವನ್ನು ಹಿಂಪಡೆದಿದೆ. ಹೀಗಾಗಿ ಇನ್ನು ಮುಂದೆ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ. ಸರ್ಕಾರದ ನಿರ್ಧಾರವನ್ನು ಆರ್‌ಎಸ್‌ಎಸ್ ಸ್ವಾಗತಿಸಿದೆ.

ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿ, 58 ವರ್ಷಗಳ ಹಿಂದೆ ಹೊರಡಿಸಲಾಗಿದ್ದ ಅಸಾಂವಿಧಾನಿಕ ಸೂಚನೆಯನ್ನು ಮೋದಿ ಸರ್ಕಾರ ಹಿಂದಕ್ಕೆ ಪಡೆದಿದೆ ಎಂದಿದ್ದಾರೆ.

ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ಜುಲೈ 9ರಂದು ಹೊರಡಿಸಿದೆ ಎನ್ನಲಾದ ಆದೇಶಕ್ಕೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ಇನ್ನು ಮುಂದೆ ಅಧಿಕಾರಿಗಳು ಚಡ್ಡಿಗಳಲ್ಲಿ ಬರಬಹುದು ಎಂದು ವ್ಯಂಗ್ಯವಾಡಿದ್ದಾರೆ.

1948ರಲ್ಲಿ ನಿಷೇಧ
1948ರಲ್ಲಿ ಮಹಾತ್ಮ ಗಾಂಧೀಜಿ ಅವರ ಹತ್ಯೆ ಬಳಿಕ ಆರ್‌ಎಸ್‌ಎಸ್ ನಿಷೇಧಿಸಲಾಗಿತ್ತು. ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲರು ನಿಷೇಧ ಹೇರಿದ್ದರು. ಆರ್‌ಎಸ್‌ಎಸ್ ಒಳ್ಳೆಯ ನಡತೆಯಿಂದ ನಿಷೇಧವನ್ನು ತೆರವು ಮಾಡಲಾಗಿತ್ತು.

1966ರಲ್ಲಿ ನಿಷೇಧ
ಗೋಹತ್ಯೆ ವಿರುದ್ಧ 1966ರ ನ. 7 ರಂದು ಸಂಸತ್‌ ಮುಂಭಾಗ ಭಾರೀ ಪ್ರತಿಭಟನೆ ನಡೆದಿತ್ತು. ಲಕ್ಷಾಂತರ ಜನರನ್ನು ಆರ್‌ಎಸ್‌ಎಸ್‌ – ಜನಸಂಘ ಸೇರಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ಆಯೋಜಿಸಿತ್ತು. ಈ ವೇಳೆ ನಡೆದ ಗೋಲಿಬಾರ್‌ನಲ್ಲಿ ಬಹಳಷ್ಟು ಜನ ಮೃತಪಟ್ಟಿದ್ದರು. ಈ ಪ್ರತಿಭಟಟನೆಯ ಬಳಿಕ ಇಂದಿರಾ ಗಾಂಧಿ, 1966ರ ನ 30 ರಂದು ಸರ್ಕಾರಿ ಸಿಬ್ಬಂದಿ ಆರ್‌ಎಸ್‌ಎಸ್‌ ಸೇರದಂತೆ ನಿರ್ಬಂಧಿಸಿದರು.

ಆರ್‌ಎಸ್‌ಎಸ್‌ ಜೊತೆ ಜಮಾತೆ ಇಸ್ಲಾಮಿಯಾ ಸದಸ್ಯತ್ವಕ್ಕೂ ನಿರ್ಬಂಧ ಹೇರಲಾಗಿತ್ತು. ಈ ಸಂಘಗಳ ಸದಸ್ಯತ್ವದಿಂದಾಗಿ ಸರ್ಕಾರದ ಮೇಲೆ ಪ್ರಭಾವ ಬೀರಬಹುದು. ಸಾಮಾಜಿಕ ನ್ಯಾಯದ ಮೇಲೆ ಎರಡೂ ಸಿದ್ಧಾಂತಗಳಿಂದ ಪ್ರಭಾವ ಎಂದು ಹೇಳಿ ಸರ್ಕಾರ ನಿಷೇಧ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.