ಡೈಲಿ ವಾರ್ತೆ: 26/ಜುಲೈ /2024

ಮುಡಾ ಸೈಟ್​ ಪಡೆದ ಬಿಜೆಪಿ-ಜೆಡಿಎಸ್​ ನಾಯಕರ ಪಟ್ಟಿ ಬಿಡುಗಡೆ ಮಾಡಿದ ಸಚಿವ ಬೈರತಿ ಸುರೇಶ್

ಬೆಂಗಳೂರು: ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸಿವೆ. ಅಲ್ಲದೇ ಬೆಂಗಳೂರಿನಿಂದ ಮೈಸೂರು ವರೆಗೆ ಪಾದಯಾತ್ರೆ ಮಾಡಲು ಬಿಜೆಪಿ ಮತ್ತು ಜೆಡಿಎಸ್​ ಮುಂದಾಗಿವೆ. ಇದಕ್ಕೂ ಮುನ್ನವೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮುಡಾದಲ್ಲಿ ಬದಲಿ ನಿವೇಶನ ಪಡೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್​​ ನಾಯಕರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಇನ್ನು ಮುಡಾ ಬದಲಿ ಸೈಟ್ ಪಡೆದುಕೊಂಡವರ ಪಟ್ಟಿಯಲ್ಲಿ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಹೆಸರು ಸಹ ಇದ್ದು, ಈ ಪ್ರಕರಣ ಮತ್ತಷ್ಟು ಸಂಚಲನಕ್ಕೆ ಕಾರಣವಾಗಿದೆ.

ಈ ಬಗ್ಗೆ ಇಂದು(ಜುಲೈ 26) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬೈರತಿ ಸುರೇಶ್, ಸ್ಪೀಕರ್ ಅವಕಾಶ ನೀಡಿದ್ದರೆ ಬಿಜೆಪಿಯವರ ಬಂಡವಾಳ ಬಿಚ್ಚಿಡ್ತಿದ್ದೆ. ಹಲವಾರು ಮಠಗಳಿಗೂ ನಿವೇಶನ ಹಂಚಿಕೆಯಾಗಿದೆ. ಜಿ.ಟಿ.ದೇವೇಗೌಡ, ಸಿ.ಎನ್​.ಮಂಜೇಗೌಡ, ಹೆಚ್​.ವಿಶ್ವನಾಥ್​. ಸಾ.ರಾ.ಮಹೇಶ್, ಹೆಚ್.ಡಿ.ಕುಮಾರಸ್ವಾಮಿಗೂ ನಿವೇಶನ ಹಂಚಿಕೆ ಇವರಿಗೆಲ್ಲರಿಗೂ ಬದಲಿ ನಿವೇಶನ ಹಂಚಿಕೆಯಾಗಿದೆ. ತನಿಖಾ ಆಯೋಗದ ಮುಂದೆ ಅಕ್ರಮವೋ ಸಕ್ರಮವೋ ತಿಳಿಯುತ್ತೆ ಎಂದು ಹೇಳಿದರು.

ಮೂಡ‌ದಲ್ಲಿ ಬದಲಿ ನಿವೇಶನ ಪಡೆದ ರಾಜಕಾರಣಿಗಳ ಪಟ್ಟಿ
1) ಎಚ್‌.ಡಿ.ಕುಮಾರಸ್ವಾಮಿ(ಜೆಡಿಎಸ್) :ಇಂಡಸ್ಟ್ರಿಯಲ್ ಸಬರ್ಬ್ ಮೂರನೇ ಹಂತ ಮೈಸೂರು. 21 ಸಾವಿರ ಚದರ ಅಡಿ ಕೈಗಾರಿಕಾ‌ ನಿವೇಶನ ಸಂಖ್ಯೆ 17/ಬಿ1. 2) ಸಾ.ರಾ.ಮಹೇಶ್(ಜೆಡಿಎಸ್) – ಮಳಲವಾಡಿ ಸರ್ವೆ ನಂಬರ್ 7/11A ರಲ್ಲಿ -011 ಗುಂಟೆ ಜಮೀನು ಬೋಗಾದಿ ಸರ್ವೆ ನಂಬರ್ 170,171,173 ರಲ್ಲಿ 2-11 ಎಕರೆ ಜಮೀನು 3) ಜಿ.ಟಿ.ದೇವೆಗೌಡ(ಜೆಡಿಎಸ್ -ಈರನಗೆರೆ 14/1 ರಲ್ಲಿ 2-25 ಎಕರೆ, ಮಾದಗಳ್ಳಿ 17 ರಲ್ಲಿ 1 ಎಕರೆ 4) ಸಿ.ಎನ್.ಮಂಜೇಗೌಡ (ಜೆಡಿಎಸ್ ಎಂಎಲ್‌ಸಿ): ಹಿನಕಲ್ ಗ್ರಾಮ ಸರ್ವೆ ನಂ 337 ರಲ್ಲಿ 1 ಎಕರೆ ದೇವನೂರು ಸರ್ವ ನಂಬರ್ 91 ರಲ್ಲಿ 2-25 ಎಕರೆ, ಕೆಸರೆ ಸರ್ವೆ ನಂಬರ್ 450 ರಲ್ಲಿ 4-15 ಎಕರೆ ಜಮೀನು, ಮೈಸೂರು ಸರ್ವೆ ನಂಬರ್ 86 ರಲ್ಲಿ 7-08 ಎಕರೆ‌ ಜಮೀನು 5) ಹೆಚ್.ವಿಶ್ವನಾಥ್ (ಬಿಜೆಪಿ ಎಂಎಲ್‌ಸಿ) ಬೆಲವತ್ತ ಸರ್ವೆ ನಂಬರ್ 32 ರಲ್ಲಿ 0-05 ಜಮೀನು 6)ಮಹದೇವಸ್ವಾಮಿ (ಬಿಜೆಪಿ): 255/1, 257 ರಲ್ಲಿ 0-34 ಗುಂಟೆ ಜಮೀನು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಹೆಸರು ಕೇಳಿಬಂದಿದ್ದರಿಂದ ಈ ಪ್ರಕರಣ ತೀಬ್ರ ಸ್ವರೂಪ ಪಡೆದುಕೊಂಡಿದೆ. ಇದೇ ಹಗರಣವನ್ನು ಹಿಡಿದುಕೊಂಡು ವಿಪಕ್ಷಗಳು ಸಿದ್ದರಾಮಯ್ಯ ಮೇಲೆ ಮುಗಿಬಿದ್ದಿವೆ. ಈ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಮುಡಾದಲ್ಲಿ ಬದಲಿ ನಿವೇಶ ಪಡೆದ ವಿಪಕ್ಷ ನಾಯಕರ ಪಟ್ಟಿ ಬಿಡುಗಡೆ ಮಾಡಿದೆ ಅಷ್ಟೇ. ಆದ್ರೆ, ಅಕ್ರಮವೋ ಸಕ್ರಮವೋ ಎಂಬುದನ್ನು ಹೇಳಿಲ್ಲ.