ಡೈಲಿ ವಾರ್ತೆ: 26/ಜುಲೈ /2024

ಉಪ್ಪುಂದ ನಿವೃತ್ತ ಮುಖ್ಯ ಇಂಜಿನಿಯರ್ ಯು. ಮಂಜುನಾಥ ವೈದ್ಯ ನಿಧನ

ಉಪ್ಪುಂದ: ನಿವೃತ್ತ ಮುಖ್ಯ ಇಂಜಿನಿಯರ್ ಉಪ್ಪುಂದದ ಯು. ಮಂಜುನಾಥ ವೈದ್ಯ(86) ಜು. 23 ರಂದು ಸ್ವಗ್ರಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಇವರು ಭೂಮರೆಡ್ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಇಂಜಿನಿಯರಿಂಗ್ ವ್ಯಾಸಂಗವನ್ನು ಮುಗಿಸಿ ಬೈಂದೂರು, ಗುಲ್ಬರ್ಗ, ಧಾರವಾಡ ಕಾರವಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿ ಮುಖ್ಯ ಇಂಜಿನಿಯರ್ ಆಗಿ ಬಡ್ತಿ ಹೊಂದಿ 1997 ಏಪ್ರಿಲ್ ತನಕ ಕೃಷ್ಣ ಮೇಲ್ದಂಡೆ ಯೋಜನೆ ಆಲಮಟ್ಟಿಯಲ್ಲಿ ಸೇವೆ ಸಲ್ಲಿಸಿದ್ದರು.

ಸರಳ ವ್ಯಕ್ತಿಯಾದ ಇವರು ತಾವು ಸೇವೆ ಸಲ್ಲಿಸಿದ ಎಲ್ಲಾ ಕಡೆಯೂ ತಮ್ಮ ಸಹೋದ್ಯೋಗಿಗಳು ಸೇರಿದಂತೆ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು.

ಅಷ್ಟೇ ಅಲ್ಲದೆ ಲಂಚ ರಹಿತ ಅಧಿಕಾರಿ ಎಂದೇ ಖ್ಯಾತರಾಗಿದ್ದರು. ನಿವೃತ್ತರಾದ ಬಳಿಕ ಲಯನ್ಸ್ ಕ್ಲಬ್ ಬೈಂದೂರು ಇದರ ಅಧ್ಯಕ್ಷರಾಗಿದ್ದರು.‌ ಮಾತ್ರವಲ್ಲದೆ ಕೂಟ ಮಹಾ ಜಗತ್ತು‌, ಬ್ರಾಹ್ಮಣ ಪರಿಷತ್ತು ಇನ್ನೂ ಮುಂತಾದ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾ ಕಲಿಕೆಗೆ ಧನ ಸಹಾಯ ಮಾಡುತ್ತಿದ್ದ ಇವರು ತಾವು ಕಲಿತ ಶಾಲೆಗೆ ಕುಡಿಯುವ ನೀರಿನ ಯಂತ್ರವನ್ನು ಕೂಡ ಕೊಡುಗೆಯಾಗಿ ನೀಡಿದ್ದರು.

ಮೃತರು ಪತ್ನಿ ಎರಡು ಹೆಣ್ಣು ಮಕ್ಕಳು ಎರಡು ಗಂಡು ಮಕ್ಕಳು ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.