ಡೈಲಿ ವಾರ್ತೆ: 04/ಆಗಸ್ಟ್/2024

ಕುಂದಾಪುರ: ಪತ್ನಿಯ ಕುತ್ತಿಗೆ ಕಡಿದು ಕೊಲೆಗೆ ಯತ್ನಿಸಿ ಸಂಭ್ರಮಿಸಿದ ಪತಿ!

ಕುಂದಾಪುರ: ಪತ್ನಿಯ ಕುತ್ತಿಗೆ ಕಡಿದು ಕೊಲೆಗೆ ಯತ್ನಿಸಿ ಪತಿ ಸಂಭ್ರಮಿಸಿದ ಘಟನೆ ಶನಿವಾರ ರಾತ್ರಿ ಕಂಡ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ರೂರುನಲ್ಲಿ ನಡೆದಿದೆ.

ಸಾಗರದ ಸೊರಬ ತಾಲೂಕಿನ ಅನಿತಾ (38) ಎಂಬಾಕೆಯೇ ಮಾರಣಾಂತಿಕ ಹಲ್ಲೆಗೊಳಗಾದವಳು. ಆಕೆಯ ಪತಿ ಲಕ್ಷ್ಮಣ (40) ಎಂಬಾತನೇ ಆರೋಪಿ.

ಈ ಕುಟುಂಬವು ಇಲ್ಲಿನ ಬಸ್ರೂರು ಕಾಶಿ ಮಠಕ್ಕೆ ಸಂಬಂಧಿಸಿದ ರೆಸಿಡೆನ್ಸಿಯಲ್ ಬ್ಲಾಕ್‌ನ ಬಾಡಿಗೆ ಮನೆಯ ಒಂದನೇ ಮನೆಯಲ್ಲಿ ಬಾಡಿಗೆಗೆ ಸೊರಬ ತಾಲೂಕಿನ ಮೂಲದ ಲಕ್ಷ್ಮಣ ಹಾಗೂ ಅನಿತಾ ದಂಪತಿ ವಾಸಿಸುತ್ತಿದ್ದರು. ಕಾಶಿ ಮಠದ ತೋಟ ನೋಡಿಕೊಳ್ಳಲೆಂದು ಅವರು 4 ತಿಂಗಳ ಹಿಂದೆ ಬಂದಿದ್ದರು.

ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಗಂಡ ಹೆಂಡತಿ ಗಲಾಟೆ ನಡೆದು ಕುಡಿದ ಮತ್ತಿನಲ್ಲಿದ್ದ ಲಕ್ಷ್ಮಣ ತನ್ನ ಪತ್ನಿಯ ಕುತ್ತಿಗೆಗೆ ಕಡಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡ ಪತ್ನಿ ಅನಿತಾ ಮನೆಯ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಇತ್ತ ಪತಿ ಲಕ್ಷ್ಮಣ ಮನೆಯ ಬಾಗಿಲು ಚಿಲಕ ಹಾಕಿಕೊಂಡು ಹಾಲ್ ನಲ್ಲಿ ಕತ್ತಿ ಹಿಡಿದು ಕುಣಿಯುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಮನೆಯ ಕಿಟಕಿ ಒಡೆದು ಅಡುಗೆ ಕೋಣೆಗೆ ನುಗ್ಗಿ ಗಂಭೀರ ಸ್ಥಿತಿಯಲ್ಲಿದ್ದ ಅನಿತಾಳನ್ನು ಹೊರತಂದು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದಾರೆ.

ಆದರೆ ಆರೋಪಿ ಮಾತ್ರ ದೆವ್ವ ಮೈಮೇಲೆ ಬಂದವನಂತೆ ಕತ್ತಿ ಹಿಡಿದು ಕುಣಿಯುತ್ತಿದ್ದ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಮನೆಯೊಳಗೆ ಅಶ್ರುವಾಯು ಪ್ರಯೋಗಿಸಿ ಒಂದೂವರೆ ಗಂಟೆಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ.
ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.