ಡೈಲಿ ವಾರ್ತೆ: 05/ಆಗಸ್ಟ್/2024

ದೇವಸ್ಥಾನದಲ್ಲಿ ವಿದ್ಯುತ್ ತಗುಲಿ ಇಬ್ಬರು ಮಹಿಳೆಯರು ಮೃತ್ಯು!

ಬೆಳಗಾವಿ: ದೇವಸ್ಥಾನದಲ್ಲಿ ವಿದ್ಯುತ್ ತಗುಲಿ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ಘಟನೆ ಸೋಮವಾರ ಸಂಜೆ ನಡೆದಿದೆ.

ಮೃತರು ಸುಳೇಭಾವಿ ಗ್ರಾಮದ ಸವಿತಾ ಫಕೀರಪ್ಪ ಒಂಟಿ(34) ಹಾಗೂ ಕಲಾವತಿ ಮಾರುತಿ ಬಿದರವಾಡಿ(41) ಎಂದು ಗುರುತಿಸಲಾಗಿದೆ.

ದೇವಸ್ಥಾನದಲ್ಲಿ ಮಹಿಳಾ ಸಂಘದ ವಾರದ ಸಭೆ ನಡೆಸಿದ ಬಳಿಕ ದೇವಸ್ಥಾನವನ್ನು ಎಲ್ಲ ಮಹಿಳೆಯರು ಸ್ವಚ್ಛಗೊಳಿಸಿದ್ದರು. ಸ್ವಚ್ಛ ಮಾಡಿದ ನೀರಿನಲ್ಲಿ ವಿದ್ಯುತ್ ತಂತಿ ಕಟ್ ಆಗಿ ಕೆಳಕ್ಕೆ ಬಿದ್ದಿತ್ತು. ಎಲ್ಲ ಕೆಲಸ ಮುಗಿಸಿ ಹೊರಗೆ ಬಂದು ಕಬ್ಬಿಣದ ಗೇಟ್ ಹಾಕುವಾಗ ಓರ್ವ ಮಹಿಳೆಗೆ ವಿದ್ಯುತ್ ಸ್ಪರ್ಶವಾಗಿದೆ. ಕೂಡಲೇ ಈಕೆಯನ್ನು ರಕ್ಷಿಸಲು ಹೋದ ಮತ್ತೊಬ್ಬ ಮಹಿಳೆಗೂ ವಿದ್ಯುತ್ ತಗುಲಿದೆ.
ವಿದ್ಯುತ್ ಸ್ಪರ್ಶಗೊಂಡು ಸವಿತಾ ಎಂಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೋರ್ವ ಮಹಿಳೆ ಕಲಾವತಿ ಬಿದರವಾಡಿಯನ್ನು ಕೂಡಲೇ ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಶ್ರಾವಣ ಸೋಮವಾರದಂದು ಇಡೀ ಗ್ರಾಮದಲ್ಲಿ ವಾರ ಬಿಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಶ್ರಾವಣ ಮಾಸದ ಮೊದಲ ದಿನವೇ ಈ ಅವಘಡ ಸಂಭವಿಸಿದ್ದರಿಂದ ಗ್ರಾಮದಲ್ಲಿ ದುಃಖದ ಮಡವಿನಲ್ಲಿ ಮುಳುಗಿದೆ. ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದು, ಮಕ್ಕಳ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.