ಡೈಲಿ ವಾರ್ತೆ: 06/ಆಗಸ್ಟ್/2024

ವಾಕಿಂಗ್‌ಗೆ ಬಂದ ಮಹಿಳೆಯ ತಬ್ಬಿದ ಆರೋಪಿ ಸೆರೆ: ಮೂವರು ಪೊಲೀಸರು ಅಮಾನತು!

ಬೆಂಗಳೂರು: ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದ ಮಹಿಳೆಗೆ ಹಗ್‌ ಮಾಡಿ, ಕಿಸ್‌ ಕೊಟ್ಟು ಪರಾರಿಯಾಗಿದ್ದ ಕಾಮುಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿ ಕ್ಯಾಬ್ ಚಾಲಕ ಸುರೇಶ್(25) ಬಂಧಿಸಲಾಗಿದೆ. ಕೋಣನಕುಂಟೆ ಬಳಿಯ ಕೃಷ್ಣಾನಗರದಲ್ಲಿ ನಡೆದಿದ್ದ ಘಟನೆಯ ವಿಡಿಯೊ ಭಾರಿ ವೈರಲ್‌ ಆಗಿತ್ತು. ಇದರಿಂದ ರಾಜಧಾನಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯು ಕೋಣನಕುಂಟೆ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ಡ್ರಾಪ್ ಮಾಡೋದಕ್ಕೆ ಬಂದಿದ್ದ. ರಸ್ತೆ ಮೇಲೆ ಹೋಗುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ್ದ. ಮಹಿಳೆಯು ಮನೆಯ ಬಳಿ ವಾಕಿಂಗ್‌ ಮಾಡುತ್ತಿದ್ದಾಗ ಅವರ ಬಳಿ ಬಂದು ಅವರನ್ನು ಬಲವಂತವಾಗಿ ಹಿಡಿದು ತಬ್ಬಿಕೊಂಡು, ಕಿಸ್‌ ಕೊಟ್ಟಿದ್ದ. ದುಷ್ಕರ್ಮಿಯಿಂದ ಬಿಡಿಸಿಕೊಂಡು ಕೂಗುತ್ತ ಮಹಿಳೆ ಓಡಿದ್ದರು. ಅವರ ಹಿಂದೆಯೇ ಓಡಿ ಹೋದ ದುರುಳ, ಮತ್ತೆ ಕಿರುಕುಳ ನೀಡಿ ಓಡಿಹೋಗಿದ್ದ.
ಶುಕ್ರವಾರ ಬೆಳಗ್ಗೆ‌ ನಡೆದಿದ್ದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಪಿಎಸ್‌ಐ ಹಾಗೂ ಇಬ್ಬರು ಸಿಬ್ಬಂದಿಯನ್ನು ಡಿಸಿಪಿ ಲೊಕೇಶ್‌ ಅಮಾನತು ಮಾಡಿದ್ದಾರೆ.