ಡೈಲಿ ವಾರ್ತೆ: 06/ಆಗಸ್ಟ್/2024

ಜೋಕಟ್ಟೆ: ಅಪ್ರಾಪ್ತ ಬಾಲಕಿಯ ಶವ ಪತ್ತೆ – ಕೊಲೆ ಶಂಕೆ, ಬೆಳಗಾವಿ ಮೂಲದ ಇಬ್ಬರು ಪೊಲೀಸ್‌ ವಶಕ್ಕೆ

ಮಂಗಳೂರು: ನಗರದ ಕಮೀಷನರೇಟ್ ನ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ತನ್ನ ಡೊಡ್ಡಪ್ಪನೊಂದಿಗೆ ವಾಸವಿದ್ದ 13 ವರ್ಷದ ಅಪ್ರಾಪ್ತ ಬಾಲಕಿಯ ಕತ್ತು ಹಿಸುಕಿ ಕೊಲೆಗೈದಿದ್ದಾರೆ ಎನ್ನಲಾದ ಘಟನೆ ಮಂಗಳವಾರ ಜೋಕಟ್ಟೆಯಲ್ಲಿ ನಡೆದಿದೆ.

ಕೊಲೆಯಾದ ಬಾಲಕಿ ಮೂಲತಃ ಬೆಳಗಾವಿ ಜಿಲ್ಲೆಯ ಸದ್ಯ ಜೋಕಟ್ಟೆಯಲ್ಲಿ ವಾಸವಾಗಿರುವ ಹನುಮಂತ ಎಂಬವರ ತಮ್ಮನ ಮಗಳು ಎಂದು ತಿಳಿದು ಬಂದಿದೆ.

ಬಾಲಕಿಯಕೊಲೆಗೆ ಸಂಬಂಧಿಸಿ ಬೆಳಗಾವಿ ಮೂಲದವರೇ ಆಗಿರುವ ಜೋಕಟ್ಟೆಯಲ್ಲಿ ವಾಸವಿರುವ ಫಕೀರಪ್ಪ(50) ಮತ್ತು ಶಾಂತಪ್ಪ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಬಾಲಕಿಯ ದೊಡ್ಡಪ್ಪ ಮತ್ತು ಫಕೀರಪ್ಪನ ಹೇಳಿಕೆಗಳನ್ನು ದಾಖಲಿಸಿಕೊಂಡ ಪೊಲೀಸರು ಅವರ ಹೇಳಿಕೆಯಲ್ಲಿ ಅನುಮಾನ ಗೊಂಡು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳಕ್ಕೆ ಪಣಂಬೂರು ಪೊಲೀಸರು, ಫಾರೆನ್ಸಿಕ್ ವಿಭಾದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.