ಡೈಲಿ ವಾರ್ತೆ: 08/ಆಗಸ್ಟ್/2024

ಕುಂದಾಪುರ: ಎಕ್ಸಲೆಂಟ್ ಪಿ.ಯು.ಕಾಲೇಜು ಮತ್ತು ಹೈಸ್ಕೂಲ್ ಸುಣ್ಣಾರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ವಲಯ ಮಟ್ಟದ ಯೋಗಾಸನ ಸ್ಪರ್ಧೆ

ಕುಂದಾಪುರ: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಹಾಗೂ ಎಕ್ಸಲೆಂಟ್ ಪಿ.ಯು ಕಾಲೇಜು ಮತ್ತು ಹೈಸ್ಕೂಲ್ ಸುಣ್ಣಾರಿ ಕುಂದಾಪುರ ಇವರ ಸಹಯೋಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ವಲಯ ಮಟ್ಟದ ಯೋಗಾಸನ ಸ್ಪರ್ಧೆ ಆ. 7 ರಂದು ಬುಧವಾರ ಎಕ್ಸಲೆಂಟ್ ಸಂಸ್ಥೆಯಲ್ಲಿ ನೆರೆವೇರಿತು.

ಈ ಸಭಾ ಕಾರ್ಯಕ್ರಮವನ್ನು ಕುಂದಾಪುರ ಚಿನ್ಮಯಿ ಆಸ್ಪತ್ರೆ ಆಡಳಿತ ನಿರ್ದೇಶಕರು ಹಾಗೂ ಚರ್ಮರೋಗ ತಜ್ಙರಾದ ಡಾ. ಉಮೇಶ್ ಪುತ್ರನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಕ್ಕಳ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಬೆಳೆವಣಿಗೆಗೆ ಯೋಗವು ಪ್ರಮುಖ ಪಾತ್ರ ವಹಿಸುತ್ತದೆ, ಜತೆಗೆ ಭಾವನಾತ್ಮಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಅಂಶಗಳನ್ನು ಒಳಗೊಂಡ ಯೋಗ ಅಧ್ಯಯನದಿಂದ ಯಶಸ್ವಿ ನಾಗರಿಕನಾಗಲು ಸಾಧ್ಯವಿದೆ ಎಂಬುದನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಂ. ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ.) ಕುಂದಾಪುರ ಇದರ ಅಧ್ಯಕ್ಷರಾದ ಎಂ.ಮಹೇಶ್ ಹೆಗ್ಡೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸತ್ಯನಾರಾಯಣ, ಹುಣ್ಸೆಮಕ್ಕಿ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ವಸಂತ, ಬಾಲಕೃ಼ಷ್ಣ ಶೆಟ್ಟಿ ಅಧ್ಯಕ್ಷರು, ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘ ಕುಂದಾಪುರ, ಗಣೇಶ್ ಶೆಟ್ಟಿ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಡುಪಿ ವಲಯ, ಶರತ್ ಕುಮಾರ್ ಶೆಟ್ಟಿ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘ ಉಡುಪಿ ಜಿಲ್ಲೆ, ಪ್ರದೀಪ ಶೆಟ್ಟಿ ಅಧ್ಯಕ್ಷರು ಪ್ರೌಢಶಾಲಾ ಅನುದಾನಿತ ಶಾಲಾ ಶಿಕ್ಷಕರ ಸಂಘ ಕುಂದಾಪುರ ವಲಯ, ಕಿರಣ್ ಕುಮಾರ್ ಯೋಗ ಶಿಕ್ಷಕರು ಹೊಂಬಾಡಿ-ಮಂಡಾಡಿ, ಸಂಜೀವ ಯೋಗ ಶಿಕ್ಷಕರು ಸ.ಹಿ.ಪ್ರಾ. ಶಾಲೆ ಹೆಸ್ಕೂತ್ತೂರು ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರಾದ ಶ್ರೀಮತಿ ಸರೋಜಿನಿ ಆಚಾರ್ಯ ಸ್ವಾಗತಿಸಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸತ್ಯನಾರಾಯಣ ಪ್ರಸ್ತಾವನೆಗೈದು, ಶಿಕ್ಷಕ ಸಂದೀಪ್ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಶೆಟ್ಟಿ ವಂದಿಸಿದರು.